ಭಾರತ - ಚೀಣ ನಡುವೆ
ನೇರ ಸಂಧಾನಕ್ಕೆ ಲಿಯು-ಸುಕಾರ್ನೊ ಕರೆ
ಜಕಾರ್ತ, ಏ. 20 - ಭಾರತ - ಚೀಣ ಗಡಿ ವಿವಾದ ಉಭಯ ರಾಷ್ಟ್ರಗಳ ಮಧ್ಯೆ ನೇರ ಸಂಧಾನದಿಂದ ಇತ್ಯರ್ಥವಾಗಲು ಕೊಲಂಬೊ ಸಲಹೆ ನಿರ್ಮಿಸಿರುವ ಅನುಕೂಲಕರ ವಾತಾವರಣ ಸಹಕಾರಿಯಾಗಿದೆ. ಎಂದು ಇಂಡೊನೀಷ್ಯ ಅಧ್ಯಕ್ಷ ಡಾ. ಸುಕರ್ನೊ ಮತ್ತು ಕಮ್ಯುನಿಸ್ಟ್ ಚೀಣ ಅಧ್ಯಕ್ಷ ಲಿಯು ಷಾ ವೊಚಿ ಇಂದು ಪ್ರಕಟಿಸಿದ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎಂಟು ದಿನಗಳ ಕಾಲ ಇಂಡೊನೀಷ್ಯದಲ್ಲಿ ಪ್ರವಾಸದಲ್ಲಿರುವ ಲಿಯು ಷಾ ವೊಚಿ ಇಂದು ರಂಗೂನಿಗೆ ಹೋಗುವ ಮುನ್ನ ಈ ಜಂಟಿ ಹೇಳಿಕೆಗೆ ಸಹಿ ಹಾಕಿದರು.
ಸಕ್ಕರೆ ಕಿಲೋಗೆ 1 ರೂ. 20 ನಯೆಪೈಸೆ
ಹಂಚಿಕೆಗೆ ಸೂಕ್ತ ವ್ಯವಸ್ಥೆ
ಬೆಂಗಳೂರು, ಏ. 20 - ಮೈಸೂರು ರಾಜ್ಯದ ಯಾವ ಭಾಗದಲ್ಲೂ ಸಕ್ಕರೆಯ ಬೆಲೆ ಒಂದು ಕಿಲೋಗ್ರಾಮಿಗೆ ಒಂದು ರೂಪಾಯಿ ಇಪ್ಪತ್ತು ನಯೇ ಪೈಸೆಗಳಿಗೆ ಮೀರದಂತೆ ಜನರಿಗೆ ದೊರಕಿಸಲಾಗುವುದೆಂದು ಕಂದಾಯ ಸಚಿವ ಶ್ರೀ ಎಂ. ವಿ. ಕೃಷ್ಣಪ್ಪನವರು ಇಂದು ಪತ್ರಿಕಾ ವರದಿಗಾರರಿಗೆ ತಿಳಿಸಿದರು.
ಬೆಂಗಳೂರು, ನಗರದಲ್ಲಿ ಸೋಮವಾರದಿಂದ ಸಕ್ಕರೆ ಸಾಕಷ್ಟು ಪ್ರಮಾಣದಲ್ಲಿ, ಕಿಲೋಗ್ರಾಮಿಗೆ 1 ರೂ. 18 ನಯೇ ಪೈಸೆಗಳಿಗೆ ನಗರದಲ್ಲಿರುವ 55 ಸಹಕಾರ ಸಂಘಗಳ ಶಾಖೆಗಳಲ್ಲಿ ದೊರಕುವುದೆಂದು ಅವರು ಆಶ್ವಾಸನೆ ನೀಡಿದರು.
ಸಕ್ಕರೆ ನಿಯಂತ್ರಣ ಜಾರಿಗೆ ಬಂದ ಕೂಡಲೇ ಅಂಗಡಿಗಳಿಂದ ಸಕ್ಕರೆ ಮಾಯವಾಗಿ ಜನರನ್ನು ಕಳವಳಕ್ಕೀಡು ಮಾಡಿದುದನ್ನು ಸಚಿವರ ಗಮಕ್ಕೆ ತಂದಾಗ, ಅವರು `ಸಕ್ಕರೆ ಅಭಾವಕ್ಕೆ ಕಾರಣವೇ ಇಲ್ಲ. ರಾಜ್ಯಕ್ಕೆ ಇದುವರೆಗೆ ತಿಂಗಳಿಗೆ 8400 ಟನ್ ಅಥವಾ 84,000 ಮೂಟೆ ಸಕ್ಕರೆ ಕೊಡಲಾಗುತ್ತಿತ್ತು. ನಿಯಂತ್ರಣದ ಆಜ್ಞೆ ಹೊರಟ ಮೇಲೆ ಅದನ್ನು 9 ಸಾವಿರ ಟನ್ನಿಗೆ ಅಂದರೆ 90,000 ಮೂಟೆಗಳಿಗೆ ಹೆಚ್ಚಿಸಲಾಗಿದೆ.