ಬೆಂಗಳೂರು: ಹೆಚ್ಚು ಪ್ರಮಾಣದ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದ ಮೇಲೆ ಸುಪ್ರೀಂಕೋರ್ಟ್ನ ಕೇಂದ್ರ ಉನ್ನತಾಧಿಕಾರ ಸಮಿತಿಯು (ಸಿಇಸಿ) ‘ಸಿ’ ವರ್ಗದಡಿ ಗುರುತಿಸಿದ್ದ ರಾಜ್ಯದ 51 ಗಣಿ ಪ್ರದೇಶಗಳ ಗುತ್ತಿಗೆಗಳನ್ನು ರದ್ದು ಮಾಡಿ ರಾಜ್ಯ ಸರ್ಕಾರ ಗುರುವಾರ ಅಧಿಸೂಚನೆ ಹೊರಡಿಸಿದೆ.
ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಬಳ್ಳಾರಿ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಪರಿಶೀಲನೆ ನಡೆಸಿದ್ದ ಸಿಇಸಿ, 51 ಗಣಿಗಳನ್ನು ‘ಸಿ’ ವರ್ಗದಡಿ ಗುರುತಿಸಿತ್ತು. ಈ ಗಣಿಗಳ ಗುತ್ತಿಗೆಗಳನ್ನು ರದ್ದು ಮಾಡಬೇಕು ಎಂಬ ಸಿಇಸಿ ಶಿಫಾರಸನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು.
ಸಿಇಸಿ ‘ಸಿ’ ವರ್ಗದಡಿ ಗುರುತಿಸಿದ್ದ ಎಲ್ಲಾ ಗಣಿಗಳ ಗುತ್ತಿಗೆಯನ್ನೂ ರದ್ದು ಮಾಡಲಾಗಿದೆ. ಈ ಸಂಬಂಧ ಅಧಿಸೂಚನೆಯನ್ನೂ ಹೊರಡಿಸಲಾಗಿದೆ. ಈಗ ಎಲ್ಲಾ ಗಣಿ ಗುತ್ತಿಗೆ ಪ್ರದೇಶಗಳು ಸರ್ಕಾರದ ವಶಕ್ಕೆ ಬಂದಿವೆ’ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಬಳ್ಳಾರಿಯ ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ (ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರ ಒಡೆತನದಲ್ಲಿತ್ತು), ಬಿ.ಆರ್.ಯೋಗೇಂದ್ರನಾಥ್ ಸಿಂಗ್, ಅಂಬಿಕಾ ಘೋರ್ಪಡೆ, ಹೊತ್ತೂರು ಟ್ರೇಡರ್ಸ್, ವಿ.ಎಸ್.ಲಾಡ್ ಅಂಡ್ ಸನ್ಸ್ (ಶಾಸಕ ಅನಿಲ್ ಲಾಡ್ ಒಡೆತನದ ಕಂಪೆನಿ), ತುಮಕೂರಿನ ಲತಾ ಮಿನರಲ್ಸ್, ಕೆನರಾ ಮಿನರಲ್ಸ್, ಮಾತಾ ಮೈನಿಂಗ್ ಕಂಪೆನಿ (ಮಾಜಿ ಸಚಿವ ವಿ.ಸೋಮಣ್ಣ ಅವರ ಪುತ್ರರ ಪಾಲುದಾರಿಕೆಯ ಕಂಪೆನಿ) ಗುತ್ತಿಗೆ ರದ್ದುಗೊಂಡಿರುವ ಪ್ರಮುಖ ಗಣಿ ಕಂಪೆನಿಗಳಾಗಿವೆ.
ಟೆಂಡರ್ ಮೂಲಕ ಹರಾಜು: ಟೆಂಡರು ಪ್ರಕ್ರಿಯೆ ಮೂಲಕ ಈ 51 ಗಣಿಗಳಿಗೆ ಹೊಸದಾಗಿ ಗುತ್ತಿಗೆ ನೀಡುವಂತೆ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಅದರಂತೆ ಶೀಘ್ರದಲ್ಲೇ ಹರಾಜು ಪ್ರಕ್ರಿಯೆ ನಡೆಸಲು ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಈಗಾಗಲೇ ಸಿದ್ಧತೆಗಳು ಆರಂಭವಾಗಿವೆ ಎಂದು ಮೂಲಗಳು ತಿಳಿಸಿವೆ.