2013ರ ಮೇ ಅಂತ್ಯಕ್ಕೆ ಈಗಿನ ವಿಧಾನಸಭೆಯ ಅವಧಿ ಪೂರ್ಣಗೊಳ್ಳುತ್ತದೆ. ಅಷ್ಟರೊಳಗೆ ಚುನಾವಣೆ ನಡೆಸುವುದು ಆಯೋಗದ ಕರ್ತವ್ಯ. ಫೆಬ್ರುವರಿ ತಿಂಗಳಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ.
ಆ ಬಳಿಕ ನೀತಿ ಸಂಹಿತೆ ಜಾರಿಯಾಗಲಿದ್ದು, ಆ ಸಂದರ್ಭದಲ್ಲಿ ಮತದಾರರನ್ನು ಓಲೈಸುವುದು ಕಷ್ಟ ಎಂದು ಈಗಿನಿಂದಲೇ `ಭಾವಿ ಜನಪ್ರತಿನಿಧಿ~ಗಳು `ಮತಬೇಟೆ~ಗೆ ಹೊರಟಿದ್ದಾರೆ. ಚುನಾವಣಾ ಆಯೋಗ ಕೂಡಾ ಇದನ್ನು ತಡೆಯಲಾರದ ಅಸಹಾಯಕ ಸ್ಥಿತಿಯಲ್ಲಿದೆ. ಈ ಬಗ್ಗೆ ವಿಶೇಷ ಚುನಾವಣಾಧಿಕಾರಿ ಆರ್. ಮನೋಜ್ ಜತೆಗಿನ ಸಂದರ್ಶನ ಇಲ್ಲಿದೆ:
* ಚುನಾವಣಾ ಪ್ರಕ್ರಿಯೆ ಪ್ರಾರಂಭವಾದ ನಂತರ ಅಭ್ಯರ್ಥಿಗಳು ನಡೆಸುವ ಅಕ್ರಮಗಳನ್ನು ತಡೆಯಲು ನೀತಿ ಸಂಹಿತೆ ಇದೆ. ಆದರೆ ಅದಕ್ಕಿಂತ ಮೊದಲೇ ಮತದಾರರಿಗೆ ಆಮಿಷ ಒಡ್ಡುವುದನ್ನು ತಡೆಯಲು ಸಾಧ್ಯ ಇಲ್ಲವೇ?
ಮಾದರಿ ನೀತಿ ಸಂಹಿತೆ ಚುನಾವಣಾ ಪ್ರಕ್ರಿಯೆ ಪ್ರಾರಂಭವಾದ ನಂತರ ಜಾರಿಗೆ ಬರುವುದರಿಂದ ನೀವು ಹೇಳುತ್ತಿರುವ ಈಗಿನ ಅಕ್ರಮಗಳನ್ನು ಅದರಿಂದ ತಡೆಯುವುದು ಸಾಧ್ಯ ಇಲ್ಲ..
* ಹಾಗಾದರೆ ಇದನ್ನು ತಡೆಯುವುದು ಹೇಗೆ?
ಚುನಾವಣಾ ನೀತಿ ಸಂಹಿತೆಯಲ್ಲಿ ಇದಕ್ಕೆ ಅವಕಾಶ ಇಲ್ಲ. ಹೀಗಾಗಿ ಅದನ್ನು ತಡೆಯುವುದಾಗಲಿ ಅಥವಾ ನಿಯಂತ್ರಿಸುವುದಾಗಲಿ ಆಯೋಗದ ವ್ಯಾಪ್ತಿಗೆ ಬರುವುದಿಲ್ಲ.
* ಆಯೋಗದ ಕರ್ತವ್ಯ ಏನು?
ಚುನಾವಣೆ ಘೋಷಣೆಯಾದ ಕ್ಷಣದಿಂದ ಮಾದರಿ ನೀತಿ ಸಂಹಿತೆ ಜಾರಿಗೆ ಬರುತ್ತದೆ. ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು; ಮುಕ್ತ ಮತ್ತು ನ್ಯಾಯಸಮ್ಮತವಾಗಿ ಚುನಾವಣೆ ನಡೆಸುವುದು.
* ಚುನಾವಣೆ ಇನ್ನೂ ಆರು ತಿಂಗಳು ಇರುವಾಗಲೇ ಮತದಾರರನ್ನು ಓಲೈಸುವ ಪ್ರಯತ್ನ ರಾಜ್ಯದಲ್ಲಿ ನಡೆಯುತ್ತಿದೆ? ಇದನ್ನು ತಡೆಯಲು ಆಯೋಗ ಏನು ಮಾಡಲು ಸಾಧ್ಯ ?
ಈ ಹಂತದಲ್ಲಿ ಯಾವ ಕ್ರಮ ತೆಗೆದುಕೊಳ್ಳುವುದಕ್ಕೂ ಸಾಧ್ಯ ಇಲ್ಲ.
* ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಕೈಕಟ್ಟಿ ಕುಳಿತರೆ ಹೇಗೆ? ಅದನ್ನು ನಿಯಂತ್ರಿಸುವುದು ಬೇಡವೇ?
ಈ ಬಗ್ಗೆ ಆಯೋಗ ಸಾಕಷ್ಟು ಚಿಂತನೆ ನಡೆಸಿದೆ. 2004ರಲ್ಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ಚುನಾವಣೆಗೆ ಇನ್ನೂ ಆರು ತಿಂಗಳು ಬಾಕಿ ಇರುವಾಗಲೇ ನೀತಿ ಸಂಹಿತೆ ಜಾರಿಗೆ ಅವಕಾಶ ನೀಡುವಂತೆ ಕೋರಿತ್ತು.
ಸರ್ಕಾರಗಳು ತಮ್ಮ ಸಾಧನೆಯ ಜಾಹಿರಾತು ನೀಡುವುದರ ಮೂಲಕ ತಮ್ಮ ಪಕ್ಷಗಳಿಗೆ ಪರೋಕ್ಷ ಬೆಂಬಲ ಆಗ್ರಹಿಸುವುದನ್ನು ತಡೆಯುವುದಕ್ಕೂ ಆಯೋಗ ಕೋರಿಕೆ ಸಲ್ಲಿಸಿತ್ತು. ಆದರೆ ಯಾವುದೂ ಜಾರಿಯಾಗಿಲ್ಲ. ಚುನಾವಣೆಗಿಂತ ಆರು ತಿಂಗಳ ಮೊದಲು ನೀತಿ ಸಂಹಿತೆ ಜಾರಿ ಬಂದರೆ ಇಂತಹ ಒಂದಷ್ಟು ಅಕ್ರಮಗಳನ್ನು ತಡೆಯಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.