ಮಂಗಳೂರು: ನಗರದ ಅಭಿವೃದ್ಧಿಗೆ ಈಗಾಗಲೇ 100 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಒಳ ರಸ್ತೆಗಳನ್ನು ಆರು ತಿಂಗಳಲ್ಲಿ ಸರಿಪಡಿಸಬೇಕು ಎಂದು ಜಿಲ್ಲಾ ಉಸ್ತವಾರಿ ಸಚಿವ ಕೃಷ್ಣ ಪಾಲೆಮಾರ್ ಅಧಿಕಾರಿಗಳಿಗೆ ಸೂಚಿಸಿದರು.
ಸೋಮವಾರ ಕೆ.ಪಿ.ಟಿ ವಿಮಾನ ನಿಲ್ದಾಣ ರಸ್ತೆಗೆ `ಸರ್ ಎಂ.ವಿಶ್ವೇಶ್ವರಯ್ಯ ರಸ್ತೆ~ ಎಂದು ಮರು ನಾಮಕರಣ ಕಾರ್ಯಕ್ರಮದಲ್ಲಿ ಮಾತನಾಡಿ, ಪಂಪ್ವೆಲ್ ಬಳಿಯ ಹೊಸ ಬಸ್ ನಿಲ್ದಾಣ ಕಾಮಗಾರಿಗೆ 15 ದಿನದಲ್ಲಿ ಚಾಲನೆ ನೀಡಿ 6 ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದರು.
ಫಲಕ ಅನಾವರಣಗೊಳಿಸಿದ ವಿಧಾನಸಭೆ ಉಪ ಸಭಾಧ್ಯಕ್ಷ ಎನ್.ಯೋಗೀಶ್ ಭಟ್ , ನಗರದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲಾಗಿದ್ದು ಹೆಚ್ಚುವರಿ ಅನುದಾನಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.
ಮೇಯರ್ ಪ್ರವೀಣ್ ಅಂಚನ್ ಅಧ್ಯಕ್ಷತೆ ವಹಿಸಿದ್ದರು. ಉಪ ಮೇಯರ್ ಗೀತಾ ಎನ್.ನಾಯಕ್, ಆಯುಕ್ತ ಹರೀಶ ಕುಮಾರ್, ಪಾಲಿಕೆ ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಯಶವಂತ ಮೀನಕಳಿಯ, ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಕುಮಾರ್, ನಗರ ಯೋಜನಾ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರೇಮಾನಂದ ಶೆಟ್ಟಿ, ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷೆ ಎಂ ರಾಜಶ್ರೀ, ಪಾಲಿಕೆ ವಿರೋಧಪಕ್ಷ ನಾಯಕರಾದ ಲ್ಯಾನ್ಸ್ಲೊಟ್ ಪಿಂಟೋ, ಪಾಲಿಕೆ ಸಚೇತಕ ಸುಧೀರ್ ಶೆಟ್ಟಿ, ಸದಸ್ಯರಾದ ಎಂ.ಶಂಕರ್ ಭಟ್, ಜಯಾನಂದ ಅಂಚನ್, ಕೆ. ಹರಿನಾಥ್ ಇದ್ದರು.