ಮಧುಗಿರಿ: ದಿನಕ್ಕೆ ಅರವತ್ತು ರೂಪಾಯಿ ಆಸೆಗೆ ಸರ್ಕಾರಿ ಶಿಕ್ಷಕನಲ್ಲದಿದ್ದರೂ ಎಸ್ಎಸ್ಎಲ್ಸಿ ಪರೀಕ್ಷೆಯ ಕೊಠಡಿ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಸುತ್ತಿದ್ದ ಅತಿಥಿ ಶಿಕ್ಷಕರೊಬ್ಬರು ಜಾಗೃತ ದಳಕ್ಕೆ ಸಿಕ್ಕಿಬಿದ್ದ ಘಟನೆ ಪಟ್ಟಣದ ಎಂಜಿಎಂ ಪ್ರೌಢಶಾಲೆಯಲ್ಲಿ ಬುಧವಾರ ನಡೆದಿದೆ.
ಅಕ್ರಮದಲ್ಲಿ ಸಿಕ್ಕಿ ಬಿದ್ದವ ಗೌರಿಬಿದನೂರು ತಾಲ್ಲೂಕಿನ ರಮಾಪುರ ಪ್ರೌಢಶಾಲೆಯ ಶಿಕ್ಷಕ ರಂಗನಾಥ್ ಎಂದು ಗುರುತಿಸಲಾಗಿದೆ. ಪರೀಕ್ಷಾ ಮೇಲ್ವಿಚಾರಕರಾಗಿ ಆಯಾಯ ತಾಲ್ಲೂಕಿನ ಶಿಕ್ಷಕರೇ ಕೆಲಸ ನಿರ್ವಹಿಸಬೇಕೆಂಬ ನಿಯಮವಿದೆ. ಆದರೆ ಇಲ್ಲಿನ ಗಂಜಲಗುಂಟೆ ಖಾಸಗಿ ಅನುದಾನಿತ ಪ್ರೌಢಶಾಲೆಯ ಶಿಕ್ಷಕ ವೆಂಕಟೇಶ್ ದಿನಕ್ಕೆ 60 ರೂಪಾಯಿ ಕೊಡುವ ಆಸೆ ಹುಟ್ಟಿಸಿ ಈತನನ್ನು ಕೆಲಸ ನಿರ್ವಹಿಸಲು ಹೇಳಿದ್ದ ಎಂದು ಹೇಳಲಾಗಿದೆ.
ಪರೀಕ್ಷಾ ಕೆಲಸಕ್ಕೆ ಮತ್ತೊಬ್ಬ ಶಿಕ್ಷಕ ಅಗತ್ಯವಿದ್ದುದನ್ನು ಮನಗಂಡು ವೆಂಕಟೇಶ್ ಪರೀಕ್ಷಾ ಅಧಿಕಾರಿಗಳಿಗೆ ಸುಳ್ಳು ಹೇಳಿ ಸ್ನೇಹಿತನಾಗಿದ್ದ ರಂಗನಾಥ್ನನ್ನು ಕರೆ ತಂದಿದ್ದ ಎಂದು ಹೇಳಲಾಗಿದೆ.