ಬೆಂಗಳೂರು: ನಗರದ ನಿವಾಸಿ ತಾರಾ ರಾಜ್ಕುಮಾರ್ (61) ಅವರ ಉದರದಲ್ಲಿ ಕಾಣಿಸಿಕೊಂಡಿದ್ದ 7 ಕೆ.ಜಿ.ಗಾತ್ರದ ಗಡ್ಡೆಯನ್ನು ಸೌತ್ ಸಿಟಿ ಆಸ್ಪತ್ರೆಯು ವೈದ್ಯರು ಈಚೆಗೆ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ತೆಗೆದಿದ್ದಾರೆ.
ಸ್ತ್ರೀರೋಗ ತಜ್ಞರಾದ ಡಾ. ಶಾಲಿನಿ ದತ್ತ ಮತ್ತು ಡಾ.ಧನಂಜಯ್ ನೇತೃತ್ವದಲ್ಲಿ ಈ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು. `ಸಾಮಾನ್ಯವಾಗಿ 10 ಕೆ.ಜಿ. ಗಾತ್ರದ ಗಡ್ಡೆಗಳು ದೇಹದಿಂದ ತೆಗೆದ ಉದಾಹರಣೆಯಿದೆ.
ಅದನ್ನು ತೆಗೆಯುವಾಗ ರಕ್ತಸ್ರಾವ ಅಧಿಕವಾಗಿರುತ್ತದೆ. ಈ ಪ್ರಕರಣದಲ್ಲಿ ರೋಗಿಗೆ ಕಡಿಮೆ ರಕ್ತಸ್ರಾವವಾಗಿದ್ದು, ಯಾವುದೇ ತೊಂದರೆಯಿಲ್ಲದೇ ಗಡ್ಡೆಯನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ~ ಎಂದು ಡಾ.ಶಾಲಿನಿ ದತ್ತ `ಪ್ರಜಾವಾಣಿ~ಗೆ ಹೇಳಿದರು.
`ಉದರದಲ್ಲಿ ಗಡ್ಡೆಯು ಬೆಳೆಯಲು ಆರಂಭವಾಗಿದ್ದರಿಂದ ಹೊಟ್ಟೆಯು ದೊಡ್ಡದಾಯಿತು. ಇದನ್ನು ಮೊದಲ ತಪಾಸಣೆಯಲ್ಲಿಯೇ ಕಂಡುಕೊಂಡು ರೋಗಿಯ ಗಮನಕ್ಕೆ ತಂದು ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಲಾಯಿತು.
ನೋವು ರಹಿತ ಗಡ್ಡೆಯಾಗಿದ್ದರಿಂದ ಶಸ್ತ್ರಚಿಕಿತ್ಸೆ ವೇಳೆಯಲ್ಲಿ ಯಾವುದೇ ತೊಂದರೆಯಾಗಲಿಲ್ಲ. ಈಗ ರೋಗಿಯು ಆರೋಗ್ಯವಾಗಿದ್ದಾರೆ~ ಎಂದರು.