ವಿಜಾಪುರ: ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮದಿಂದ ಇಲ್ಲಿ ಹಮ್ಮಿಕೊಂಡಿರುವ ಅಂಗವಿಕಲರ ಉದ್ಯೋಗ ಮೇಳದಲ್ಲಿ ಮೊದಲ ದಿನ 70 ಜನ ಅಂಗವಿಕಲ ರನ್ನು ಉದ್ಯೋಗಕ್ಕಾಗಿ ಸ್ಥಳದಲ್ಲಿಯೇ ಆಯ್ಕೆ ಮಾಡಲಾಯಿತು. ವಿಜಾಪುರ, ಬಾಗಲಕೋಟೆ, ಗುಲ್ಬರ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ 829 ಜನ ಅಂಗವಿಕಲರು ಉದ್ಯೋಗಕ್ಕಾಗಿ ಈ ಮೇಳದಲ್ಲಿ ಹೆಸರು ನೋಂದಾಯಿಸಿದ್ದಾರೆ. 42 ಜನ ಉದ್ಯೋಗದಾತರು ಪಾಲ್ಗೊಂಡಿದ್ದಾರೆ.
ಮೇಳದಲ್ಲಿ ಪಾಲ್ಗೊಂಡಿದ್ದವರಲ್ಲಿ 70 ಜನರನ್ನು ಉದ್ಯೋಗಕ್ಕಾಗಿ ಸ್ಥಳದಲ್ಲಿಯೇ ಆಯ್ಕೆ ಮಾಡಲಾ ಯಿತು. 288 ಜನ ಅಭ್ಯರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಉದ್ಯೋಗ ಅಧಿಕಾರಿ ರುದ್ರಣ್ಣಗೌಡ ತಿಳಿಸಿದ್ದಾರೆ. ಎಸ್ಎಸ್ಎಲ್ಸಿ ಮತ್ತು ಪಿಯುಸಿ ವ್ಯಾಸಂಗ ಮಾಡಿರುವ 619 ಜನ, ಐಟಿಐ ಮತ್ತು ಡಿಪ್ಲೊಮಾ ವ್ಯಾಸಂಗ ಪೂರ್ಣಗೊಳಿಸಿರುವ 210 ಜನ ಅಭ್ಯರ್ಥಿಗಳು ಈ ಮೇಳದಲ್ಲಿ ಪಾಲ್ಗೊಂಡಿದ್ದಾರೆ.
ಮೇಳ ಮಾ. 10ರಂದೂ ನಡೆಯಲಿದ್ದು, ಉದ್ಯೋಗಕ್ಕೆ ಆಯ್ಕೆಯಾದವರಿಗೆ ಉದ್ಯೋಗ ಪತ್ರ ವಿತರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಉದ್ಯೋಗ ಮೇಳ ಉದ್ಘಾಟಿಸಿದ ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣ ಶೆಟ್ಟಿ, ಅಂಗವಿಕಲರಿಗಾಗಿಯೇ ವಿಶೇಷ ಉದ್ಯೋಗ ಮೇಳ ಏರ್ಪಡಿಸುವ ಮೂಲಕ ಸರ್ಕಾರ ಅಂಗವಿಕಲರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದರು. ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಎಂ.ಎಸ್. ಖೇಡ, ಕೀಳರಿಮೆ ತೊರೆದು ದಿಟ್ಟತನದಿಂದ ಉದ್ಯೋಗ ಕೈಗೊಳ್ಳುವಂತೆ ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಡಿ.ಪಿ. ವಸಂತ ಪ್ರೇಮಾ, ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕ ಹಾಗೂ ಮೇಳದ ಸಂಚಾಲಕ ಶ್ರೀಕಾಂತ ಮಾಲಗತ್ತಿ, ವಿಠ್ಠಲರಾವ ಉಪಾಧ್ಯೆ ಇತರರು ಪಾಲ್ಗೊಂಡಿದ್ದರು. ಪ್ರಾಚಾರ್ಯ ರಮೇಶ ದೇಸಾಯಿ ಸ್ವಾಗತಿಸಿದರು. ಉದ್ಯೋಗ ಅಧಿಕಾರಿ ಜಿ.ಜೆ. ರುದ್ರಣ್ಣಗೌಡ ವಂದಿಸಿದರು.