ಯಳಂದೂರು: ಪಟ್ಟಣದ ಪಶುಸಂಗೋಪನಾ ಇಲಾಖೆಯ ಆಸ್ಪತ್ರೆಯ ಹಿಂಭಾಗದಲ್ಲಿದ್ದ ಬೃಹತ್ ಗಾತ್ರದ 70 ವರ್ಷ ಹಳೆಯ `ಸುರಾಯಿ~ ಮರವನ್ನುಯಾರ ಗಮನಕ್ಕೂ ಬಾರದ ಹಾಗೆ ಗಾಂಧಿ ಜಯಂತಿ ದಿನವಾದ ಭಾನುವಾರ ಕಡಿದು ಹಾಕಿದ ಘಟನೆ ನಡೆದಿದೆ.
ಮರವನ್ನು ಕಡಿದು ಹಾಕಬೇಕಾದರೆ ಅರಣ್ಯ ಇಲಾಖೆಯ ಅನುಮತಿಬೇಕು, ಜೊತೆಗೆ ಸಂಬಂಧಪಟ್ಟ ಸ್ಥಳೀಯ ಆಡಳಿತದ ಗಮನಕ್ಕೆ ತರಬೇಕು. ಆದರೆ ಈ ಮರವನ್ನು ತಾಲ್ಲೂಕು ಪಂಚಾಯಿತಿಯ ಗಮನಕ್ಕೂ ತರದೇ ಕಡಿದು ಹಾಕಲಾಗುತ್ತಿದೆ ಎಂದು ವಿಷಯ ತಿಳಿದು ತಾ.ಪಂ. ಸದಸ್ಯೆ ವೆಂಕಟಾಚಲ ಸ್ಥಳಕ್ಕೆ ಭೇಟಿ ನೀಡಿದರು. ಅವರು ದೂರವಾಣಿ ಕರೆಯ ಮೂಲಕ ಇಲಾಖೆಯ ಡಾ. ಬಾಲಸುಂದರ್ ಅವರ ಜೊತೆ ಚರ್ಚಿಸಿದ ಮೇಲೆ ಈ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಯಿತು.
`ಮಹಾತ್ಮರು ಹುಟ್ಟಿದ ದಿನ ಗಿಡ ಮರಗಳನ್ನು ನೆಡುವ ಮೂಲಕ ಆಚರಿಸುವ ವಾಡಿಕೆ ಇದೆ. ಇದೆ ಆದರೆ ಸ್ವತಂತ್ರ ಪೂರ್ವದ ಮರವನ್ನು ಯಾರ ಗಮನಕ್ಕೂ ಬಾರದೇ ಕಡಿದು ಹಾಕಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ.
ಈ ಮರವು ಸುಮಾರು 50 ಸಾವಿರ ರೂ. ಬೆಲೆ ಬಾಳುತ್ತದೆ. ಇದನ್ನು ಏಕಾಏಕಿ ಕತ್ತರಿಸುವ ನಿರ್ಧಾರಕ್ಕೆ ಬಂದಿರುವುದು ಸರಿಯಲ್ಲ. ಇದನ್ನು ಕತ್ತರಿಸುವ ವೇಳೆ ಆಸ್ಪತ್ರೆಯ ಹೆಂಚಿನ ಮೇಲೆ ಕೊಂಬೆಯೊಂದು ಬಿದ್ದು ಅದೂ ಕೂಡ ಜಖಂ ಆಗಿದೆ. ಹಾಗಾಗಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರುವುದಾಗಿ ವೆಂಕಟಾಚಲ `ಪ್ರಜಾವಾಣಿ~ಗೆ ತಿಳಿಸಿದರು.