ಢಾಕಾ (ಪಿಟಿಐ): ನಾಲ್ಕು ವರ್ಷಗಳ ಹಿಂದೆ ಭಾರಿ ದಂಗೆ ನಡೆಸಿದ ಆರೋಪದ ಮೇಲೆ ಗಡಿಭದ್ರತಾ ಪಡೆಯ 723 ಯೋಧರಿಗೆ ಸೇನಾ ನ್ಯಾಯಾಲಯ ಶನಿವಾರ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದರಿಂದಾಗಿ ದಂಗೆ ಆರೋಪದ ಮೇಲೆ ಜೈಲು ಸೇರಿದ ಸಿಬ್ಬಂದಿಯ ಸಂಖ್ಯೆ ಆರು ಸಾವಿರಕ್ಕೆ ಏರಿದೆ.
ಹತ್ತು ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿತು. 2009ರ ಫೆಬ್ರುವರಿ 25ರಂದು ಪಿಖಾನಾ ಎಂಬಲ್ಲಿ ನಡೆದ ಸೇನಾ ದಂಗೆಯಲ್ಲಿ 57 ಸೇನಾಧಿಕಾರಿಗಳು ಸೇರಿದಂತೆ ಒಟ್ಟು 74 ಜನರು ಹತ್ಯೆಗೀಡಾಗಿದ್ದರು.
ದಂಗೆಗೆ ಸಂಬಂಧಿಸಿದಂತೆ ಈವರೆಗೂ ಬಾಂಗ್ಲಾ ಗಡಿಭದ್ರತಾ ಪಡೆಯ ಒಟ್ಟು 6,011 ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. 20 ಜನರು ನೆರೆಯ ಭಾರತದಲ್ಲಿ ತಲೆಮರೆಸಿಕೊಂಡಿದ್ದಾರೆ.
723 ಸಿಬ್ಬಂದಿಗೆ ಶಿಕ್ಷೆ ವಿಧಿಸುವ ಮೂಲಕ ಸೇನಾ ದಂಗೆಗೆ ಸಂಬಂಧಿಸಿದ ವಿಚಾರಣೆ ಕೊನೆಗೊಂಡಂತಾಗಿದ್ದು, ಈ ವರ್ಷಾಂತ್ಯದಲ್ಲಿ ಇನ್ನುಳಿದ ಪ್ರಕ್ರಿಯೆಗಳು ಕೊನೆಗೊಳ್ಳುವ ಸಾಧ್ಯತೆ ಇದೆ.
ಮಾಜಿ ಪ್ರಧಾನಿ ಗುಜ್ರಾಲ್ಗೆ ಪ್ರಶಸ್ತಿ
ಮಾಜಿ ಪ್ರಧಾನಿ ಐ.ಕೆ. ಗುಜ್ರಾಲ್, ಮಾಜಿ ಉಪಪ್ರಧಾನಿ ದಿವಂಗತ ಜಗಜೀವನ್ ರಾಂ ಹಾಗೂ 1971ರ ಯುದ್ಧದಲ್ಲಿ ಪಾಕಿಸ್ತಾನ ಸೆರೆಯಿಂದ ಬಾಂಗ್ಲಾದ ಈಗಿನ ಪ್ರಧಾನಿ ಶೇಕ್ ಹಸೀನಾ ಕುಟುಂಬದ ಸದಸ್ಯರನ್ನು ರಕ್ಷಿಸಿದ್ದ ನಿವೃತ್ತ ಕರ್ನಲ್ ಅಶೋಕ್ ತಾರಾ ಸೇರಿದಂತೆ 61 ವಿದೇಶಿಯರಿಗೆ ಬಾಂಗ್ಲಾದೇಶ ಸರ್ಕಾರ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಿದೆ.
ಒಟ್ಟು 61 ಪ್ರಶಸ್ತಿ ಪುರಸ್ಕೃತರ ಪೈಕಿ 51 ಭಾರತೀಯರು. ಕೈಫಿ ಅಜ್ಮಿ ಪುತ್ರಿ ಹಾಗೂ ರಾಜ್ಯಸಭಾ ಸದಸ್ಯೆ ಶಬಾನಾ ಅಜ್ಮಿ, ದಿ. ಜಗಜೀವನ್ ರಾಂ ಅವರ ಪ್ರಶಸ್ತಿಯನ್ನು ಅವರ ಮೊಮ್ಮಗ ಹಾಗೂ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಪುತ್ರ ಅಂಶುಲ್ ಅಭಿಜಿತ್ ಸ್ವೀಕರಿಸಿದರು.
1971ರಲ್ಲಿ ಪಾಕಿಸ್ತಾನ ವಶದಿಂದ ಬಾಂಗ್ಲಾವನ್ನು ಮುಕ್ತಿಗೊಳಿಸಿದ ನಂತರ ನೆರವು ನೀಡಿದ ವಿದೇಶಿ ಮಿತ್ರರಿಗೆ ಬಾಂಗ್ಲಾ ಸರ್ಕಾರ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಮೊಟ್ಟ ಮೊದಲ ಬಾರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಕಳೆದ ವರ್ಷ ಸೋನಿಯಾ ಗಾಂಧಿ ಅತ್ತೆಯ ಪರವಾಗಿ ಈ ಪ್ರಶಸ್ತಿ ಸ್ವೀಕರಿಸಿದ್ದರು.
ಶಂಕಿತರ ವಿಚಾರಣೆ
ಢಾಕಾ (ಎಪಿ): ನ್ಯೂಯಾರ್ಕ್ನ ಪ್ರತಿಷ್ಠಿತ ಫೆಡರಲ್ ರಿಸರ್ವ್ ಬಹುಮಹಡಿ ಕಟ್ಟಡವನ್ನು ಸ್ಫೋಟಿಸಲು ಯತ್ನಿಸಿ ಎಫ್ಬಿಐ ಅಧಿಕಾರಿಗಳಿಗೆ ಸೆರೆ ಸಿಕ್ಕ ಬಾಂಗ್ಲಾ ಪ್ರಜೆ ಖಾಜಿ ಮಹಮ್ಮದ್ ರಿಜ್ವಾನುಲ್ಲಾ ಅಹಸಾನ್ ಫೀಸ್ಗೆ ಪಾಠ ಹೇಳಿದ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮತ್ತು ಸಹಪಾಠಿಗಳನ್ನು ಪೊಲೀಸರು ಶನಿವಾರ ತನಿಖೆಗೆ ಒಳಪಡಿಸಿದರು.
ವಿದ್ಯಾಭ್ಯಾಸಕ್ಕಾಗಿ ಸದ್ಯ ಅಮೆರಿಕದಲ್ಲಿರುವ 21 ವರ್ಷದ ನಫೀಸ್ಗೆ ಯಾವುದಾದರೂ ಉಗ್ರ ಸಂಘಟನೆಯೊಂದಿಗೆ ಸಂಬಂಧವಿತ್ತೆ ಎಂದು ಪೊಲೀಸರು ಪ್ರಶ್ನಿಸಿದರು ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.