ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7.56 ಟಿಎಂಸಿ ನೀರಿಗೆ ಅನುಮತಿ ಕೋರಿಕೆ

ಕಳಸಾ– ಬಂಡೂರಿ: ರಾಜ್ಯ ಸರ್ಕಾರ ಮನವಿ ಸಲ್ಲಿಸುವ ಸಾಧ್ಯತೆ
Last Updated 24 ಡಿಸೆಂಬರ್ 2013, 7:11 IST
ಅಕ್ಷರ ಗಾತ್ರ

ಬೆಂಗಳೂರು: ಕಳಸಾ–ಬಂಡೂರಿ ನಾಲಾ ಯೋಜನೆ­ಯಿಂದ 7.56 ಟಿಎಂಸಿ ಅಡಿ ನೀರು ಬಳಕೆ ಮಾಡಿಕೊಳ್ಳಲು ಅನು­ಕೂಲ­ವಾಗುವಂತೆ ಮಧ್ಯಂತರ ಆದೇಶ ನೀಡಲು ಕೋರಿ ರಾಜ್ಯ ಸರ್ಕಾರ ಮಹಾದಾಯಿ ನ್ಯಾಯಮಂಡಳಿಗೆ ಮನವಿ ಸಲ್ಲಿಸುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮ­ವಾರ ಇಲ್ಲಿ ಕರೆದಿದ್ದ ವಿಧಾನ­ಮಂಡಲದ ಉಭಯ ಸದನಗಳ ನಾಯಕರ ಸಭೆಯಲ್ಲಿ ಮಧ್ಯಂತರ ಆದೇಶ­ಕ್ಕಾಗಿ ಮನವಿ ಸಲ್ಲಿಸುವ ಕುರಿತು ಚರ್ಚೆಯಾಗಿದೆ.

ಹುಬ್ಬಳ್ಳಿ – ಧಾರವಾಡ, ಬಾಗಲ­ಕೋಟೆ, ಗದಗ, ಬೆಳಗಾವಿ ನಗರ ಹಾಗೂ ಕೆಲವು ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು ರಾಜ್ಯ ಸರ್ಕಾರ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಆದರೆ, ಗೋವಾ ರಾಜ್ಯ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹಾದಾಯಿ ನ್ಯಾಯ­ಮಂಡಳಿ ರಚಿಸಿದ್ದು, ಮಂಡ­ಳಿಯ ಅಧ್ಯಕ್ಷ ಜೆ.ಎಂ.ಪಾಂಚಾಲ್‌ ನೇತೃತ್ವದ ತಂಡ ವಾಸ್ತವ ಸ್ಥಿತಿ ಅರಿಯಲು ರಾಜ್ಯದಲ್ಲಿ ಪ್ರವಾಸ ಹಮ್ಮಿಕೊಂಡಿದೆ.

ಮಹಾದಾಯಿ ನದಿಯಲ್ಲಿ ರಾಜ್ಯದ ಪಾಲು 24.15 ಟಿಎಂಸಿ ಅಡಿ ಎಂದು ಕರ್ನಾಟಕ ಹೇಳುತ್ತಿದೆ. ಈ ನದಿ ಮಹಾ­ರಾಷ್ಟ್ರ ಮತ್ತು ಗೋವಾ­­ದಲ್ಲೂ ಹರಿಯು­ತ್ತಿದ್ದು, ಒಟ್ಟಾರೆ ಮೂರೂ ರಾಜ್ಯಗಳಿಗೆ ನೀರು ಹಂಚಿಕೆಯಾ­ಗಬೇಕು.

ಮಧ್ಯಂತರ ತೀರ್ಪು ಬಂದರೆ ಕೇಂದ್ರ ಜಲ ಆಯೋಗ ಮತ್ತು ಪರಿಸರ ಇಲಾಖೆಯ ಅನುಮತಿ ಪಡೆದು ಕಳಸಾ ಬಳಿ ಡ್ಯಾಂ ನಿರ್ಮಿಸಲು ಅನು­ಕೂಲ­ವಾಗಲಿದೆ. ಇದು ಅರಣ್ಯದ ವ್ಯಾಪ್ತಿ­ಯಲ್ಲಿ ಬರಲಿದ್ದು, ಡ್ಯಾಂ ನಿರ್ಮಾಣ­ವಾಗದ ಹೊರತು ನಾಲೆಗಳ ನಿರ್ಮಾಣ ಕಾರ್ಯ ಪೂರ್ಣ­ಗೊಂಡರೂ ನೀರು ಬಳಸಿಕೊಳ್ಳಲು ಆಗುವುದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

2014ರ ಜುಲೈ ವೇಳೆಗೆ ನಾಲೆಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳ­ಲಿದೆ. ಮಧ್ಯಂತರ ಆದೇಶ ಬಂದರೆ ಮುಂದಿನ ಪ್ರಕ್ರಿಯೆಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ ಎಂದರು. ನ್ಯಾಯ-­ಮಂಡಳಿಯ ಮುಂದಿನ ವಿಚಾರಣೆ ಮಾರ್ಚ್‌ 4ರಂದು ನಡೆಯಲಿದೆ.

ತಜ್ಞರೊಂದಿಗೆ ಚರ್ಚೆ: ಕಾನೂನು ತಜ್ಞ­ರೊಂದಿಗೆ ಚರ್ಚಿಸಿದ ನಂತರ ರಾಜ್ಯದ ನಿಲುವನ್ನು ನ್ಯಾಯಮಂಡಳಿಗೆ ತಿಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕುಡಿಯುವ ನೀರಿನ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದರು.

ನ್ಯಾಯಮಂಡಳಿ ಮುಂದೆ ಸಮರ್ಥ­ವಾಗಿ ವಾದ ಮಂಡನೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಅಂತರರಾಜ್ಯ ಜಲ ವಿವಾದಗಳಲ್ಲಿ ರಾಜ್ಯದ ಪರವಾಗಿ ವಾದ ಮಾಡುತ್ತಿರುವ ಕಾನೂನು ತಂಡ­ದೊಂದಿಗೆ ಈ ಸಂಬಂಧ ಚರ್ಚೆ ನಡೆಸ­ಲಾಗುವುದು ಎಂದು ತಿಳಿಸಿದರು.

ವಿರೋಧ ಪಕ್ಷಗಳ ಮುಖಂಡರಿಂದ ಅನೇಕ ಸಲಹೆಗಳು ಬಂದಿವೆ. ಅವು­ಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು. ನದಿ ನೀರು ಹಂಚಿಕೆ ವಿಚಾರದಲ್ಲಿ ಸರ್ಕಾ­ರದ ನಿಲುವು ಏನಾಗಿರುತ್ತದೆ ಎಂದು ಈಗಲೇ ಹೇಳುವುದು ಕಷ್ಟ ಎಂದರು.

ಡ್ಯಾಂ ನಿರ್ಮಾಣ ಕಾರ್ಯವನ್ನು ತಕ್ಷಣ ಕೈಗೆತ್ತಿಕೊಳ್ಳಬೇಕು. ಪರಿಸರ ಇಲಾ­ಖೆಯ ಅನುಮತಿ ಪಡೆಯಬೇಕು. ಮಧ್ಯಂತರ ತೀರ್ಪು ಪಡೆಯಲು ಪ್ರಯತ್ನಿ­ಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಎಚ್‌.ಡಿ.­ಕುಮಾರಸ್ವಾಮಿ ಒತ್ತಾ­ಯಿಸಿದರು.

ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಡಿ.ವಿ.ಸದಾನಂದಗೌಡ, ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ಶಾಸಕ ಎನ್.ಎಚ್‌.­ಕೋನ­ರೆಡ್ಡಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT