ಬೆಳಗಾವಿ: ಅಧಿಕೃತ ದಾಖಲೆಗಳಿಲ್ಲದೇ 8 ಕೋಟಿ ರೂಪಾಯಿ ಮೌಲ್ಯದ 23.46 ಕೆ.ಜಿ. ಚಿನ್ನ, 2.39 ಕೆ.ಜಿ. ವಜ್ರದ ಆಭರಣಗಳು, 25.62 ಲಕ್ಷ ರೂಪಾಯಿ ನಗದು ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಮಾಲು ಸಮೇತ ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಗುರುವಾರ ನಿಲ್ದಾಣದ ಭದ್ರತಾ ಅಧಿಕಾರಿಗಳು ಹಾಗೂ ಪೊಲೀಸರು ಬಂಧಿಸಿದ್ದಾರೆ.
ಸಾಂಬ್ರಾ ವಿಮಾನ ನಿಲ್ದಾಣದ ಮೂಲಕ ಮುಂಬೈಗೆ ತೆರಳಲು ಆಗಮಿಸಿದ್ದ ಆರೋಪಿಗಳಾದ ಅಶುತೋಷ ದಬಕೆ, ಮಹೇಶ ಪಾಂಡೆ ಹಾಗೂ ಜಯವಂತ ಘಡಸಿ ಅವರ ಚೀಲಗಳನ್ನು ಶೋಧಿಸಿದಾಗ ಚಿನ್ನಾಭರಣಗಳು ಪತ್ತೆಯಾಗಿವೆ.
5,69,80,158 ರೂಪಾಯಿ ಬೆಲೆ ಬಾಳುವ 23.46 ಕೆ.ಜಿ. ಚಿನ್ನದ ಆಭರಣ, 2,30,26,071 ರೂ. ಬೆಲೆ ಬಾಳುವ 2.39 ಕೆ.ಜಿ. ವಜ್ರದ ಆಭರಣ ಹಾಗೂ 25,62,480 ರೂಪಾಯಿ ನಗದು ಹಣವನ್ನು ಆರೋಪಿಗಳಿಂದ ವಶಪಡಿಸಿಕೊಂಡು ಅವರನ್ನು ಬಂಧಿಸಲಾಗಿದೆ.
ಅಪಾರ ಪ್ರಮಾಣದ ಆಭರಣ ಹಾಗೂ ಹಣವನ್ನು ಎಲ್ಲಿಂದ ಎಲ್ಲಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಅವು ಯಾರಿಗೆ ಸೇರಿದ್ದಾಗಿವೆ ಎಂಬ ಬಗೆಗೆ ತನಿಖೆ ಮಾಡಲಾಗುತ್ತಿದೆ. ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠ ಸಂದೀಪ್ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ತಿಂಗಳ 7 ರಂದು ಅಧಿಕೃತ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ 1.35 ಕೋಟಿ ರೂಪಾಯಿ ಬೆಲೆ ಬಾಳುವ ಐದು ಕೆ.ಜಿ. ಚಿನ್ನಾಭರಣಗಳನ್ನು ಇಲ್ಲಿ ವಶಪಡಿಸಿಕೊಂಡಿದ್ದನ್ನು ಸ್ಮರಿಸಬಹುದಾಗಿದೆ.