ಮೈಸೂರು: `ನಾಡ ಅಧಿದೇವತೆ ಚಾಮುಂಡಿ ಬೆಟ್ಟದಲ್ಲಿ 8.1 ಎಕರೆ ಪ್ರದೇಶದಲ್ಲಿ ವಾಹನ ನಿಲುಗಡೆ ಹಾಗೂ ಬೃಹತ್ ಮಳಿಗೆ ನಿರ್ಮಾಣ ಮಾಡಲಾಗುವುದು~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಹೇಳಿದರು.
`ಇದಕ್ಕಾಗಿ 8.1 ಎಕರೆ ಜಾಗವನ್ನು ಗುರುತಿಸಲಾಗಿದ್ದು ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳುವಂತೆ ತಹಶೀಲ್ದಾರ್ಗೆ ಸೂಚಿಸಲಾಗಿದೆ. 6 ಎಕರೆ ಜಾಗವನ್ನು ಸ್ವಇಚ್ಛೆಯಿಂದ ಕೊಡಲು ಭೂಮಾಲೀಕರು ಒಪ್ಪಿಕೊಂಡಿದ್ದು, 2.1 ಎಕರೆಗೆ ಸಂಬಂಧಿಸಿದಂತೆ ಇಬ್ಬರ ಜೊತೆ ಮಾತುಕತೆ ನಡೆಸಬೇಕಿದೆ. ಕಂದಾಯ ಇಲಾಖೆ ಸಮೀಕ್ಷೆ ಪ್ರಕಾರ ಭೂಮಾಲೀಕರಿಗೆ 2 ಕೋಟಿ ರೂಪಾಯಿ ಹಣ ನೀಡಲಾಗುವುದು~ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
`ನಂದಿಯಿಂದ ದೇವಸ್ಥಾನದವರೆಗೆ ಇರುವ ರಸ್ತೆಯನ್ನು ಚತುಷ್ಪಥ (4 ಪಥ) ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಈ ಕುರಿತು 19.5 ಕೋಟಿ ರೂಪಾಯಿ ವೆಚ್ಚದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಈಗಾಗಲೇ 4 ಕೋಟಿ ರೂಪಾಯಿ ಮಂಜೂರಾಗಿದೆ. ಅದೇ ರೀತಿ ಕುರುಬಾರಹಳ್ಳಿ ವೃತ್ತದಿಂದ ನಂದಿವರೆಗೆ ಏಕಮುಖ ಸಂಚಾರ ಮಾಡಲಾಗುವುದು~ ಎಂದು ಹೇಳಿದರು.
ಇದಕ್ಕೂ ಮುನ್ನ ಮುಜರಾಯಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಮಾರ್ಚ್ ತಿಂಗಳ ಅಂತ್ಯದೊಳಗೆ ಎರಡೂ ಇಲಾಖೆಗಳಿಂದ ಕೈಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವ ಬಗ್ಗೆ ಚರ್ಚಿಸಿದರು. ಎರಡೂ ಇಲಾಖೆಗಳ ಅಭಿವೃದ್ಧಿ ಕುರಿತು ರಾಮದಾಸ್ ನೀಡಿದ ವಿವರಗಳು ಹೀಗಿವೆ.