ಕುಂದಾಪುರ: ರಾಜ್ಯದ ಬಡ ಹಾಗೂ ಸಾಮಾನ್ಯ ಜನರಿಗೆ ಅನೂಕೂಲವಾಗಬೇಕು ಎನ್ನುವ ಉದ್ದೇಶದಿಂದ ರಾಜ್ಯದ ಬಿಜೆಪಿ ಸರ್ಕಾರ ಬಡ ಜನರಿಗೆ ಹಕ್ಕುಪತ್ರ ನೀಡುವ ಕರ್ನಾಟಕ ಭೂ ಕಂದಾಯ ಕಾಯಿದೆಯ 94 ಸಿ ಗೆ ತಿದ್ದುಪಡಿಯನ್ನು ಮಾಡಲು ಯೋಜನೆಯನ್ನು ರೂಪಿಸಿ ಎರಡು ಸದಗಳಲ್ಲಿಯೂ ಒಪ್ಪಿಗೆಯನ್ನು ಪಡೆದು ಅಂಗೀಕಾರಕ್ಕಾಗಿ ರಾಜ್ಯಪಾಲರಿಗೆ ಕಳುಹಿಸಿದರೆ, ಕಾಂಗ್ರೆಸ್ನ ಹಿಂಬಾಗಿಲ ಪ್ರಯತ್ನಗಳಿಗೆ ಮಣೆ ಹಾಕಿದ ರಾಜ್ಯಪಾಲರು ಮಸೂದೆಯ ಉಪಯೋಗ ರಾಜ್ಯದ ಜನತೆಗೆ ಆಗದಂತೆ ಮಾಡಿದ್ದಾರೆ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸುನೀಲ್ ಕುಮಾರ್ ಆರೋಪಿಸಿದರು.
ಕುಂದಾಪುರದ ಬಿಜೆಪಿ ಕ್ಷೇತ್ರ ಸಮಿತಿ ವತಿಯಿಂದ ಶಾಸ್ತ್ರಿ ವೃತ್ತದ ಬಳಿ ನಿವೇಶನ ರಹಿತರಿಗೆ ಹಕ್ಕುಪತ್ರ ನೀಡುವ 94 ಸಿ ತಿದ್ದುಪಡಿ ಮಸೂದೆಯನ್ನು ಹಿಂತಿರುಗಿಸಿದ ರಾಜ್ಯಪಾಲರ ಕ್ರಮವನ್ನು ವಿರೋಧಿಸಿ ಶುಕ್ರವಾರ ನಡೆದ ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪುರಸಭಾಧ್ಯಕ್ಷ ಕೆ.ಮೋಹನ್ದಾಸ್ ಶೆಣೈ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಾಣಿಗೋಪಾಲ ಉಪಸ್ಥಿತರಿದ್ದರು.
ಕುಂದಾಪುರ ವಿಧಾನಸಭಾ ಸಭಾ ಕ್ಷೇತ್ರದ ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಸ್ವಾಗತಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರವೀಂದ್ರ ದೊಡ್ಮನೆ ವಂದಿಸಿದರು. ಬಿಜೆಪಿಯ ಕುಂದಾಪುರ ಘಟಕದ ಪ್ರಧಾನ ಕಾರ್ಯದರ್ಶಿ ರಾಜೇಶ್ ಕಾವೇರಿ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ಗೆ ಮನವಿ ನೀಡಲಾಯಿತು.