ಉಡುಪಿ: ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಷನ್ ಸಹಯೋಗದಲ್ಲಿ ಅಕ್ಟೋಬರ್ 13 ರಿಂದ 16 ರವರೆಗೆ ಉಡುಪಿ ಅಜ್ಜರಕಾಡು ಕ್ರೀಡಾಂಗಣದಲ್ಲಿ ಕಾರ್ಪೊರೇಶನ್ ಬ್ಯಾಂಕ್ ಪ್ರಾಯೋಜಿತ 28ನೇ ರಾಜ್ಯ ಜೂನಿಯರ್ ಮತ್ತು ಸೀನಿಯರ್ ಅಥ್ಲೆಟಿಕ್ ಚಾಂಪಿಯನ್ಷಿಪ್ ನಡೆಯಲಿವೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಾಸಕ ರಘುಪತಿ ಭಟ್, ಈ ಕೂಟದಲ್ಲಿ ರಾಜ್ಯದ 30 ಜ್ಲ್ಲಿಲೆಗಳ, ಡಿವೈಎಸ್ಎಸ್, ಭಾರತ ಕ್ರೀಡಾ ಪ್ರಾಧಿಕಾರ ತಂಡದ ಸುಮಾರು ಎರಡು ಸಾವಿರ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಕಾರ್ಪ್ ಬ್ಯಾಂಕ್ ಕ್ರೀಡಾಕೂಟಕ್ಕೆ ರೂ.10 ಲಕ್ಷ ನೆರವು ನೀಡಿದೆ ಎಂದರು.
ಮೂರು ದಿಗಳ ಈ ಕ್ರೀಡಾಕೂಟದಲ್ಲಿ 240 ಸ್ಪರ್ಧೆಗಳು ನಡೆಯಲಿವೆ. ಪ್ರವೇಶ ಪತ್ರಗಳು ಹಾಗೂ ಸ್ಪರ್ಧೆಗಳ ಬಗ್ಗೆ ಮಾಹಿತಿಯನ್ನು ರಾಜ್ಯ ಅಥ್ಲೆಟಿಕ್ ಸ್ಪರ್ಧೆಯು ಈಗಾಗಲೇ ಎಲ್ಲ ಜಿಲ್ಲಾ ಸಂಸ್ಥೆಗಳಿಗೆ ರವಾನಿಸಿದೆ. ಅ.13ರಂದು ಸಂಜೆ ಉದ್ಘಾಟನೆಯೊಂದಿಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ಈ ಕ್ರೀಡಾಕೂಟದಲ್ಲಿ ಮಾಜಿ ಅಂತರರಾಷ್ಟ್ರೀಯ ಓಟಗಾರ್ತಿ ಅಶ್ವಿನಿ ನಾಚಪ್ಪ ಸೇರಿದಂತೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಪಟುಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕ್ರೀಡಾಕೂಟಕ್ಕೆ ಪೂರ್ವ ತಯಾರಿಯಾಗಿ ಕ್ರೀಡಾಂಗಣದ ಸಿದ್ಧತಾ ಕಾರ್ಯ ನಡೆದಿದೆ ಎಂದರು.