ಅಂಕೋಲಾ: ಗಣೇಶ ಚತುರ್ಥಿಯಲ್ಲಿ ಮಣ್ಣಿನಿಂದ ಮಾಡಿದ ಗಣಪತಿಯನ್ನು ಹಬ್ಬದ ನಂತರ ವಿಸರ್ಜನೆ ಮಾಡುತ್ತಾರೆ. ಆದರೆ ಇಲ್ಲಿನ ತಹಶೀಲ್ದಾರ್ ಕಚೇರಿಯ ಮಣ್ಣಿನ ಗಣಪ ಮಾತ್ರ ಗೋಡೆಯಲ್ಲಿಯೇ ವಿರಾಜಮಾನನಾಗಿದ್ದಾನೆ.
ಈ ಗೋಡೆ ಗಣಪನಿಗೂ ಒಂದು ಹಿನ್ನೆಲೆ ಇದೆ. ಬ್ರಿಟಿಷರು ತಾಲ್ಲೂಕು ದಂಡಾಧಿಕಾರಿಗಳ ಕಚೇರಿ ನಿರ್ಮಾಣಕ್ಕೆ ಮುಂದಾಗಿದ್ದರು. ಮಣ್ಣು, ಸುಣ್ಣ, ಬೆಲ್ಲವನ್ನು ಮಿಶ್ರಣ ಮಾಡಿ ಅದನ್ನು ಹದಗೊಳಿಸಿ ಕಟ್ಟಡವನ್ನು ನಿರ್ಮಾಣ ಮಾಡುತ್ತಿದ್ದರು. ಗೋಡೆ ಕಟ್ಟುತ್ತಿರುವಾಗ ಅದು ಉದುರಿ ಬೀಳುತ್ತಿತ್ತು.
ಎಷ್ಟೇ ಪ್ರಯತ್ನಿಸಿದ್ದರೂ ಗೋಡೆ ಮೇಲೇಳುತ್ತಿರಲಿಲ್ಲ. ಇದರಿಂದಾಗಿ ಕಟ್ಟಡ ಕಾರ್ಮಿಕರು ಮತ್ತು ಬ್ರಿಟಿಷ್ ಅಧಿಕಾರಿಗಳು ಗೊಂದಲಕ್ಕೀಡಾದರು. ಅರ್ಧದಲ್ಲಿಯೇ ಸ್ಥಗಿತಗೊಂಡ ಗೋಡೆಯ ಮೇಲೆಯೇ ಕಟ್ಟಡ ಕಾರ್ಮಿಕರು ಮಣ್ಣಿನಿಂದ ಗಣಪನ ಮೂರ್ತಿ ನಿರ್ಮಿಸಿ, ಕಟ್ಟಡ ಪೂರ್ಣಗೊಳಿಸುವಂತೆ ಬೇಡಿಕೊಂಡರು. ನಂತರ ಯಾವುದೇ ಅಡೆತಡೆಯಾಗದೇ ಕಟ್ಟಡವು ಪೂರ್ಣಗೊಂಡಿತು ಎಂಬ ಪ್ರತೀತಿಯಿದೆ.