ಉಡುಪಿ: ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ (ಐಸಿಡಿಎಸ್) ಖಾಸಗೀಕರಣವನ್ನು ವಿರೋಧಿಸಿ, ಕನಿಷ್ಠ ವೇತನಕ್ಕೆ ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಐಸಿಡಿಎಸ್ ಮಿಶನ್ ಪ್ರಕ್ರಿಯೆಯನ್ನು ಈ ತಕ್ಷಣ ಕೈಬಿಡಬೇಕು. ಯೋಜನೆಯನ್ನು ಕಾರ್ಪೋರೇಟ್ ಸಂಸ್ಥೆಗಳು, ಸ್ವಸಹಾಯ ಗುಂಪುಗಳಿಗೆ ಯಾವುದೇ ಕಾರಣಕ್ಕೂ ವಹಿಸಬಾರದು. ಅಂಗನವಾಡಿ ಕಾರ್ಯಕರ್ತೆಯರ ಜವಾಬ್ದಾರಿಗಳನ್ನು ಬೇರೆಯವರಿಗೆ ವರ್ಗಾಯಿಸಬಾರದು. ಅಂಗನವಾಡಿ ಕೇಂದ್ರಗಳ ಕೆಲಸದ ಒತ್ತಡ ಹೆಚ್ಚಾಗಿದೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಆದ್ದರಿಂದ ವೇತನ ಹೆಚ್ಚಳ ಮಾಡಬೇಕು ಎಂದು ಪ್ರತಿಭಟನಾಕರರು ಆಗ್ರಹಿಸಿದರು.
ಐಸಿಡಿಎಸ್ ಯೋಜನೆಯನ್ನು ಆಹಾರ ಭದ್ರತಾ ವ್ಯಾಪ್ತಿಗೆ ತರಬೇಕು. ರಾಜ್ಯದ ಎಲ್ಲ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಿ ಶಾಶ್ವತ ಶಿಶುವಿಹಾರಗಳಾಗಿ ಪರಿವರ್ತಿಸಬೇಕು. ಏಕ ಪ್ರಕಾರದ ಸೇವಾ ನಿಯಮಾವಳಿಗಳನ್ನು ರೂಪಿಸಬೇಕು. ಸಹಾಯಕಿಯರ ಮಾಸಿಕ ಸಭೆ ನಡೆಸಬೇಕು ಮತ್ತು ತರಬೇತಿ ನೀಡಬೇಕು. ಈಗಾಗಲೇ ನೀಡುತ್ತಿರುವ ಮರಣ ಪರಿಹಾರ ಭತ್ಯೆಯನ್ನು ರೂ.50 ಸಾವಿರಕ್ಕೆ ಏರಿಸಬೇಕು ಮತ್ತು ಸಹಾಯಕಿಯರಿಗೂ ನೀಡಬೇಕು ಎಂದು ಒತ್ತಾಯಿಸಿದರು. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷೆ ರತಿ ಶೆಟ್ಟಿ, ಉಪಾಧ್ಯಕ್ಷೆ ವನಜಾ, ಕಾರ್ಯದರ್ಶಿ ಸುಶೀಲ ನಾಡ, ಕೋಶಾಧಿಕಾರಿ ಆಶಾ ಲತಾ, ಮೋಹಿನಿ, ಶಕೀಲ ಎಸ್ ಶೆಟ್ಟಿ, ಸುಶೀಲ ಬಗ್ವಾಡಿ, ಸಿಐಟಿಯು ಮುಖಂಡರಾದ ದಾಸ ಭಂಡಾರಿ, ಸುರೇಶ್ ಕಲ್ಲಾಗರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.