ರಾಯಚೂರು: ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು(ಐಸಿಡಿಎಸ್) ಖಾಸಗೀಕರಣ ಮಾಡಬಾರದು, ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ ₨15,000 ಎಂಬುದು ಸೇರಿದಂತೆ 23 ಬೇಡಿಕೆ ಈಡೇರಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಶುಕ್ರವಾರ ನಗರದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದರು.
ಕರ್ನಾಟಕ ರಾಜ್ಯ ಅಂಗನವಾಡಿ ಸಿಐಟಿಯು ಸಂಯೋಜಿತ ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಎಐಟಿಯುಸಿ ಸಂಯೋಜಿತ ಒಕ್ಕೂಟದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದರು.
ನಗರದ ರೈಲ್ವೆ ಸ್ಟೇಷನ್ ರಸ್ತೆ ಹತ್ತಿರ ಇರುವ ಸಾರ್ವಜನಿಕ ಉದ್ಯಾನದಿಂದ ಪ್ರತಿಭಟನಾ ರ್ಯಾಲಿ ಆರಂಭಿಸಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ತಿಮ್ಮಪ್ಪ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಸರ್ಕಾರ ಐಸಿಡಿಎಸ್ ಮಿಶನ್ ಎಂಬ ಪ್ರಕ್ರಿಯೆ ಕೈ ಬಿಡಬೇಕು, ಈ ಯೋಜನೆಯನ್ನು ಎನ್.ಜಿ.ಓ. ಗಳು, ಕಾರ್ಪೊರೇಟ್ ಸಂಸ್ಥೆಗಳು, ಸ್ವಸಹಾಯ ಗುಂಪುಗಳು ಸೇರಿದಂತೆ ಬೇರೆಯವರಿಗೆ ವಹಿಸಬಾರದು. ಯಾವುದೇ ಸ್ವರೂಪದಲ್ಲಿಯೂ ಖಾಸಗೀಕರಣ ಮಾಡಬಾರದು. ಬದಲಾಗಿ ಐಸಿಡಿಎಸ್ನ್ನು ಕ್ರಮಬದ್ಧಗೊಳಿಸಿ ಅದನ್ನೊಂದು ಇಲಾಖೆಯನ್ನಾಗಿಸಬೇಕು ಎಂದು ಒತ್ತಾಯ ಮಾಡಿದರು.
ಕರ್ನಾಟಕ 12 ಜಿಲ್ಲೆಗಳಲ್ಲಿ ಐಸಿಡಿಎಸ್ ಯೋಜನೆ ಖಾಸಗೀಕರಣ ಪ್ರಸ್ತಾಪ ಕೈ ಬಿಡಬೇಕು, ಎಲ್ಲ ಕೆಲಸಗಳನ್ನು ಈಗಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಟ್ಟು ಕೆಲಸ ಕಾಯಂಗೊಳಿಸಬೇಕು, ಎಲ್ಲ ಅಂಗನವಾಡಿಗಳನ್ನು ಮೇಲ್ದರ್ಜೇಗೇರಿಸಿ ಕಾಯಂ ಶಿಶು ವಿಹಾ-ರಗಳನ್ನಾಗಿಸಬೇಕು, ಶಾಲಾ ಪೂರ್ವ ಶಿಕ್ಷಣವನ್ನು ಶಿಕ್ಷಣ ಹಕ್ಕು ಕಾಯ್ದೆ–2009ರ ಅಡಿಯಲ್ಲಿ ತರಬೇಕು, ಅಂಗನವಾಡಿಗಳನ್ನು ಶಾಲಾ ಪೂರ್ವ ಶಿಕ್ಞಣ ಜಾರಿ ಮಾಡುವ ನೋಡಲ್ ಕೇಂದ್ರಗಳನ್ನಾಗಿಸಬೇಕು ಎಂದು ಆಗ್ರಹಿಸಿದರು.
ಸಿಐಟಿಯು ಸಂಘಟನೆ ಮುಖಂಡರಾದ ಶೇಕ್ಷಾ ಖಾದ್ರಿ, ಎಚ್ ಪದ್ಮಾ, ವರಲಕ್ಷ್ಮೀ, ಡಿ.ಎಸ್ ಶರಣಬಸವ, ಕೆ.ಜಿ ವಿರೇಶ,ಯಂಕಪ್ಪ ಕೆಂಗಲ್, ಚನ್ನಬಸಪ್ಪ, ಗಿರಿಯಪ್ಪ ಪೂಜಾರಿ, ಜಿಲಾನಿ,ಗೋಕುರಮ್ಮ, ಅನಸೂಯಾ ಹಾಗೂ ಅಂಗನವಾಡಿ ನೌಕರರ ಸಂಘದ ಮುಖಂಡರಾದ ಸಂಧ್ಯಾ, ಪಾರ್ವತಿ ಮಂಚಲಾಪುರ, ರಂಗಮ್ಮ ಅನ್ವರ್, ಶಕುಂತಲಾ ದೇಸಾಯಿ, ಲಕ್ಷ್ಮೀ ನಗನೂರು, ಮರಿಯಮ್ಮ, ಬಸಮ್ಮ ಲಿಂಗಸುಗೂರು ಮುಂತಾದವರು ಪ್ರತಿಭಟನೆ ನೇತೃತ್ವವಹಿಸಿದ್ದರು.