ಕವಿತಾಳ: ಸಮೀಪದ ಹಿರೇಹಣಿಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಸೇನಪುರ ಗ್ರಾಮದಲ್ಲಿ ಅಂಗನವಾಡಿ ಕೇಂದ್ರದ ಮುಂದೆ ಖಾಸಗಿ ವ್ಯಕ್ತಿಯೊಬ್ಬರು ತಿಪ್ಪೆ ಹಾಕಿದ್ದು ಮಕ್ಕಳು ಗಲೀಜು ಪ್ರದೇಶದಲ್ಲಿ ಆಟವಾಡಬೇಕಾದ ಅನಿವಾರ್ಯತೆ ಉಂಟಾಗಿದೆ.
40-50 ಮಕ್ಕಳಿರುವ ಅಂಗನವಾಡಿ ಕೇಂದ್ರದ ಸುತ್ತಮುತ್ತಲೂ ಎಲ್ಲೆಂದರಲ್ಲಿ ಹರಿಯುವ ನೀರು ಮತ್ತು ತಿಪ್ಪೆಗಳ ರಾಶಿ ವಿಪರೀತ ಗಲೀಜಿಗೆ ಕಾರಣವಾಗಿವೆ.
ಅಂಗನವಾಡಿಯಲ್ಲಿ ಕಲಿಯುವ ಮಕ್ಕಳಿಗೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ಕಾರ್ಯಕರ್ತೆ ಸಿಡಿಪಿಒ ಅವರಿಗೆ ಮಾಹಿತಿ ನೀಡಿದ್ದು ಸಿಡಿಪಿಒ ತಿಪ್ಪೆ ತೆರವುಗೊಳಿಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಲಿಖಿತ ದೂರು ನೀಡಿದ್ದಾರೆ.
ಪಂಚಾಯಿತಿ ಅಧಿಕಾರಿಗಳು 2011 ನ. 3ರಂದು ಮೂರು ದಿನಗಳಲ್ಲಿ ತೆರವುಗೊಳಿಸುವಂತೆ ಸೂಚಿಸಿ ನೋಟಿಸ್ ನೀಡಿದ್ದರೂ ತಿಪ್ಪೆಯನ್ನು ತೆಗೆದಿಲ್ಲ. ಅಪೌಷ್ಟಿಕತೆ ಬಗ್ಗೆ ಗಮನ ನೀಡುವುದರ ಜೊತೆಗೆ ಮುದ್ದು ಕಂದಮ್ಮಗಳು ಆಟವಾಡುವ ಅಂಗನವಾಡಿ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ಮಕ್ಕಳ ಆರೋಗ್ಯ ರಕ್ಷಣೆ ಬಗ್ಗೆ ಅಧಿಕಾರಿಗಳು ನಿಗಾ ವಹಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.