ಎಚ್.ಡಿ.ಕೋಟೆ: ಅಂಗವಿಕಲತೆ ಶಾಪವಲ್ಲ, ಆತ್ಮವಿಶ್ವಾಸದಿಂದ ಮುನ್ನುಗ್ಗಿದರೆ ಎಲ್ಲರೂ ಸಮಾಜದ ಮುಖ್ಯವಾಹಿನಿಗೆ ಬರಬಹುದು ಎಂದು ತಹಶೀಲ್ದಾರ್ ಎನ್.ಸಿ. ಜಗದೀಶ್ ತಿಳಿಸಿದರು.
ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಮಾದಾಪುರ ಮತ್ತು ಹೈರಿಗೆ ಗ್ರಾಮ ಪಂಚಾಯಿತಿ ಅಂಗವಿಕಲರಿಗೆ ತಪಾಸಣೆ, ಅರಿವು ಹಾಗೂ ಸಮನ್ವಯತೆ ಶಿಬಿರದಲ್ಲಿ ಮಾತನಾಡಿದ ಅವರು, ಅಂಗವಿಕಲತೆ ಹುಟ್ಟಿನಿಂದ ಮತ್ತು ನಂತರದ ದಿನಗಳಲ್ಲೂ ಬರುತ್ತದೆ. ಆದ್ದರಿಂದ ಸಂಕೋಚ ಬಿಟ್ಟು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
ಅಂಗವಿಕಲರ ಕ್ಷೇಮಾಭಿವೃದ್ಧಿಗೆ ಶೇ 3ರಷ್ಟು ಅನುದಾನ ಬಳಸಲು ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರವಿದೆ ಎಂದು ಹೇಳಿದ ಅವರು, ಸರ್ಕಾರದ ಸವಲತ್ತುಗಳನ್ನು ವಿತರಿಸುವಲ್ಲಿ ಅಧಿಕಾರಿಗಳು ವಿಳಂಬ ಮಾಡಬಾರದು. ತಾಲ್ಲೂಕಿನಲ್ಲಿ ಬಾಕಿ ಇರುವ ಅಂಗವಿಕಲರ ಮಾಶಾಸನವನ್ನು ಕೂಡಲೇ ಬಿಡುಗಡೆ ಮಾಡಿಸಲಾಗುವುದು ಎಂದು ಹೇಳಿದರು.
ತಾ.ಪಂ. ಅಧ್ಯಕ್ಷ ಜಿ.ಗೋಪಾಲಸ್ವಾಮಿ ಶಿಬಿರ ಉದ್ಘಾಟಿಸಿದರು. ಗ್ರಾ.ಪಂ.ಅಧ್ಯಕ್ಷೆ ಪುಷ್ಪ,ತಹಶೀಲ್ದಾರ್ ಎನ್.ಸಿ. ಜಗದೀಶ್, ಇಒ ಕೃಷ್ಣರಾಜ್, ಸಿಡಿಪಿಒ ರಾಮಕೃಷ್ಣಯ್ಯ, ಆರೋಗ್ಯ ಇಲಾಖೆಯ ಮುದ್ದುಮಲ್ಲಯ್ಯ, ಮುರುಳೀಧರ್, ರವಿಶಂಕರ್, ತಾ.ಪಂ. ಸದಸ್ಯೆ ಚಂದ್ರಮ್ಮ, ಗ್ರಾ.ಪಂ. ಉಪಾಧ್ಯಕ್ಷ ಸಿದ್ದಾಚಾರಿ, ಅಂಗವಿಕಲರ ಸಂಯೋಜಕ ಮಹದೇವಯ್ಯ ಹಾಜರಿದ್ದರು.