ನವದೆಹಲಿ (ಪಿಟಿಐ): ರೈಲಿನಿಂದ ಇಳಿಯುವಾಗ ಕಾಲು ಕಳೆದುಕೊಂಡು ಪರಿಹಾರಕ್ಕಾಗಿ 22 ವರ್ಷ ಅಲೆದಾಡಿದ ಅಂಗವಿಕಲನಿಗೆ ಹೈಕೋರ್ಟ್ ಕೊನೆಗೂ ಅಭಯ ಹಸ್ತ ಚಾಚಿದೆ.
ನ್ಯಾಯಮೂರ್ತಿ ಸಂಜಯ ಕಿಶನ್ ಕೌಲ್ ಮತ್ತು ರಾಜೀವ್ ಶಕದಾರ್ ನೇತೃತ್ವದ ನ್ಯಾಯಪೀಠ ಈ ಕಕ್ಷಿದಾರನಿಗೆ ಏಕ ಸದಸ್ಯ ಪೀಠದ ಮುಂದೆ ಹಾಜರಾಗಬೇಕು ಮತ್ತು ಮುಂದಿನ ವಿಚಾರಣೆ ನಡೆಯುವ ಮಾರ್ಚ್ 12ರ ಒಳಗಾಗಿ ವಿಷಯದ ಕುರಿತು ಅರ್ಜಿ ಸಲ್ಲಿಸುವಂತೆ ಕಕ್ಷಿದಾರ ತಿಲಕ್ ರಾಜ್ಸಿಂಗ್ ಅವರಿಗೆ ಸೂಚಿಸಿದೆ. `ಈ ತಾತ್ಕಾಲಿಕ ಅರ್ಜಿಯ ವಿಚಾರಣೆಗೆ ಅನುಮತಿ ನೀಡಲಾಗಿದೆ. ಮುಂದಿನ ವಿಚಾರಣೆಗಾಗಿ ಮಾರ್ಚ್ 12 ರಂದು ಹಾಜರಾಗುವಂತೆ ಕಕ್ಷಿದಾರನಿಗೆ ಸೂಚಿಸಲಾಗಿದೆ~ ಎಂದು ನ್ಯಾಯಾಲಯ ಹೇಳಿದೆ.
ಘಟನೆ ಸಂಭವಿಸಿ 21 ವರ್ಷದ ಬಳಿಕ ಅರ್ಜಿ ಸಲ್ಲಿಸಿದ್ದರಿಂದ ವಿಚಾರಣೆ ಕೈಗೊಳ್ಳುವುದಿಲ್ಲ ಎಂದು 2010ರಲ್ಲಿ ಸಲ್ಲಿಸಿದ್ದ ಮನವಿಯನ್ನು ಏಕ ಸದಸ್ಯ ಪೀಠ ನಿರಾಕರಿಸಿತ್ತು. ಇದರ ವಿರುದ್ಧ ಸಿಂಗ್ ಸಲ್ಲಿಸಿದ ಮೇಲ್ಮನವಿಯನ್ನು ನ್ಯಾಯಾಲಯ ವಿಚಾರಣೆಗೆ ಕೈಗೆತ್ತಿಕೊಂಡಿದೆ. ಸಿಂಗ್ ಅವರು 1987ರಲ್ಲಿ ಉತ್ತರ ಪ್ರದೇಶದ ಲೂಧಿಯಾನಾದಿಂದ ಮೀರತ್ ಕಡೆಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಆದರೆ ಮುಜಫರಾಬಾದ್ ನಿಲ್ದಾಣದಲ್ಲಿ ರೈಲು ನಿಲುಗಡೆಯಾಗಿತ್ತು. ಸಿಂಗ್ ಕುಳಿತಿದ್ದ ಬೋಗಿಯಲ್ಲಿ ಸಾಕಷ್ಟು ಬೆಳಕು ಇಲ್ಲದಿದ್ದರಿಂದ ಅವರು ಬೋಗಿ ಬದಲಿಸುತ್ತಿದ್ದಾಗ ಯಾವುದೇ ಮುನ್ಸೂಚನೆ ನೀಡದೇ ರೈಲು ಚಲಿಸಲಾರಂಭಿಸಿತ್ತು. ಆಗ ಅವರು ಕಾಲು ಕಳೆದುಕೊಂಡಿದ್ದರು. ವೈದ್ಯಕೀಯ ಚಿಕಿತ್ಸೆಗಾಗಿ ರೈಲ್ವೆಯು ಸಿಂಗ್ಗೆ 5 ಸಾವಿರ ರೂಪಾಯಿ ನೀಡಲು ಮುಂದಾಗಿತ್ತು.ಆದರೆ ಅವರು ಅದನ್ನು ತಿರಸ್ಕರಿಸಿದ್ದರು.