ಬೆಂಗಳೂರು: ನಗರದಲ್ಲಿ ಜರುಗಿದ ಅಖಿಲ ಭಾರತ ಅಂಗವಿಕಲರ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ದೂರದ ರಾಜ್ಯ ಹಾಗೂ ಜಿಲ್ಲೆಗಳಿಂದ ಬಂದಿದ್ದ ಆಟಗಾರರು ಸರಿಯಾದ ವಿಳಾಸ ಗೊತ್ತಿಲ್ಲದೆ ಪರದಾಡಿದ ಘಟನೆ ನಡೆದಿದೆ.
ಸರಿಯಾದ ವಿಳಾಸ ಗೊತ್ತಿಲ್ಲದೆ ಕೆಲವರು ವಿಠಲ ಮಲ್ಯ ರಸ್ತೆಯಲ್ಲಿಯಲ್ಲಿರುವ ಸೇಂಟ್ ಜೋಸೆಫ್ಸ್ ಪ್ರೌಢಶಾಲಾ ಕ್ರೀಡಾಂಗಣಕ್ಕೆ ತೆರಳಿ ಗೊಂದಲಕ್ಕೆ ಒಳಗಾದರು. ಆಹ್ವಾನ ಪತ್ರಿಕೆಯಲ್ಲಿ ಕೂಡ ಸ್ಪಷ್ಟ ಮಾಹಿತಿ ಇರಲಿಲ್ಲ.
ಕೋರಮಂಗಲದಲ್ಲಿರುವ ಸೇಂಟ್ ಜೋಸೆಫ್ಸ್ ಕ್ರೀಡಾ ಸಮುಚ್ಛಯ ಕ್ರೀಡಾಂಗಣದಲ್ಲಿ ನಡೆದ ಎರಡು ದಿನಗಳ ಈ ಟೂರ್ನಿಯಲ್ಲಿ ಕೇವಲ ನಾಲ್ಕು ತಂಡಗಳು ಪಾಲ್ಗೊಂಡಿದ್ದವು. ಕರ್ನಾಟಕ ತಂಡದಲ್ಲಿ ದೂರದ ಜಿಲ್ಲೆಗಳಿಂದ ಬಂದ ಆಟಗಾರರೂ ಇದ್ದರು.
ಆದರೆ ಈ ಕ್ರೀಡಾಂಗಣದಲ್ಲೂ ಸಂಘಟಕರು ಸರಿಯಾದ ವ್ಯವಸ್ಥೆ ಮಾಡಿರಲಿಲ್ಲ. `ಟೂರ್ನಿಯ ಹಿಂದಿನ ದಿನವೂ ಆಟಗಾರರು ಒಟ್ಟಿಗೆ ಸೇರಿರಲಿಲ್ಲ. ಬ್ಯಾಟ್ ಹಾಗೂ ಚೆಂಡು ಹೊಂದಿಸಿಕೊಂಡ್ದ್ದಿದೇ ಟೂರ್ನಿಯ ದಿನ. ಅದೆಲ್ಲಾ ಬದಿಗಿರಲಿ, ಟೂರ್ನಿ ಎಲ್ಲಿ ನಡೆಯುುತ್ತದೆ ಎಂಬುದೇ ಗೊತ್ತಿರಲಿಲ್ಲ~ ಎಂದು ಕೆಲ ಅಂಗವಿಕಲ ಆಟಗಾರರು ದೂರಿದರು.
ಈ ಟೂರ್ನಿಯ ಫೈನಲ್ನಲ್ಲಿ ಹರಿಯಾಣ ತಂಡವನ್ನು ಸೋಲಿಸಿದ ಪಶ್ಚಿಮ ಬಂಗಾಳ ಚಾಂಪಿಯನ್ ಆಯಿತು. ಕರ್ನಾಟಕ ತಂಡ ಆಂಧ್ರಪ್ರದೇಶ ವಿರುದ್ಧ ಸೋಲು ಕಂಡಿತು. ಚಾಂಪಿಯನ್ ತಂಡ 10 ಸಾವಿರ ರೂ. ಬಹುಮಾನ ಹಾಗೂ ಟ್ರೋಫಿ ಪಡೆಯಿತು.