ಕೆಂಗೇರಿ: `ನೊಂದವರನ್ನು ನೋಡಿ ಮರುಗುವುದಕ್ಕಿಂತ ಅವರಿಗೆ ಸಹಾಯ ಮಾಡುವ ಉದಾರ ಮನೋಭಾವವನ್ನು ಬೆಳೆಸಿಕೊಳ್ಳಬೇಕು' ಎಂದು ರಾಜ್ಯಸಭಾ ಸದಸ್ಯ ಎಂ.ರಾಮಾಜೋಯಿಸ್ ಕರೆ ನೀಡಿದರು.
ಮಾಗಡಿ ರಸ್ತೆಯ ಚೆನ್ನೇನಹಳ್ಳಿಯಲ್ಲಿ ಶುಕ್ರವಾರ ಭಾರತ ವಿಕಾಸ ಪರಿಷತ್ ಚಾರಿಟೆಬಲ್ ಟ್ರಸ್ಟ್ನ ವಿಕಲಾಂಗ ಸಹಾಯತ ಮತ್ತು ತರಬೇತಿ ಕೇಂದ್ರದ ಭವನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
`ಪರಿಷದ್ ವತಿಯಿಂದ ಮತ್ತಷ್ಟು ತರಬೇತಿ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಅಂಗವಿಕಲರಿಗೆ ಹೆಚ್ಚಿನ ಸಹಾಯ ಮಾಡಲು ಹೊರಟಿರುವುದು ಶ್ಲಾಘನೀಯ' ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
`ಮನುಷ್ಯನ ಬದುಕಿನಲ್ಲಿ ವಿದ್ಯೆಗೆ ನೀಡಿದಷ್ಟು ಪ್ರಾಮುಖ್ಯತೆಯನ್ನು ಧರ್ಮ ಸಂಸ್ಕೃತಿಗಳಿಗೂ ಕೊಡಬೇಕು. ಸಂಸ್ಕೃತಿಯ ಸಂರಕ್ಷಣೆ ಜತೆ ಜತೆಗೆ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು' ಎಂದು ಅವರು ಹೇಳಿದರು. ವಿಧಾನಪರಿಷತ್ ಸದಸ್ಯ ಡಾ.ಎಸ್.ಆರ್.ಲೀಲಾ ಮೊದಲಾದವರು ಹಾಜರಿದ್ದರು.