ವಿಜಾಪುರ: ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ಅವರು ನಡೆಸುತ್ತಿರುವ ಜಾಕೀರ್ ಹುಸೇನ್ ಸ್ಮಾರಕ ಪ್ರತಿಷ್ಠಾನವನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿ `ರಾಜ್ಯ ವಿಕಲಚೇತನರ ಹೋರಾಟ ಸಮಿತಿ~ ನೇತೃತ್ವದಲ್ಲಿ ಅಂಗವಿಕಲರು ಮಂಗಳವಾರ ಇಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿಯ ಸಿದ್ಧೇಶ್ವರ ದೇವಸ್ಥಾನದಿಂದ ಮೆರವಣಿಗೆ ಆರಂಭಿಸಿ ಗಾಂಧಿಚೌಕ್ನಲ್ಲಿ ಕೇಂದ್ರ ಸಚಿವರ ಪ್ರತಿಕೃತಿ ದಹಿಸಿದರು. ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸಮಿತಿಯ ಅಧ್ಯಕ್ಷ ಪರಶುರಾಮ ಗುನ್ನಾಪುರ, ನಗರಸಭೆ ಸದಸ್ಯ ರವಿ ಕುಲಕರ್ಣಿ ಇತರರು ಮಾತನಾಡಿ, ಸಲ್ಮಾನ್ ಖುರ್ಷಿದ್ ಅವರ ಟ್ರಸ್ಟ್ನಲ್ಲಿ ಗೋಲ್ಮಾಲ್ ನಡೆದಿದೆ. ಅದನ್ನು ಕಪ್ಪು ಪಟ್ಟಿಗೆ ಸೇರಿಸಬೇಕು.
ಅಂಗವಿಕಲರಿಗೆ ಸಂವಿಧಾನ ಬದ್ಧವಾಗಿ ಸಿಗಬೇಕಿರುವ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ಅಶೋಕ ವಾಲಿಕಾರ, ಸುನೀಲ್ ತೇಲ್ಕರ್, ಸುರೇಶ ಚವ್ಹಾಣ, ಖಲೀಲ್ ಮುಲ್ಲಾ, ಬಿ.ಬಿ. ಪಾಟೀಲ, ಸಿ.ಎಂ. ಸಾರಂಗಮಠ, ಮಲ್ಲಿಕಾರ್ಜುನ ಕರ್ನಾಳ, ಎಂ.ಬಿ. ಉಮರಾಣಿ, ಮಹೇಶ, ವಿರೇಶ, ಕವಿತಾ ಕಾಂಬಳೆ, ಶ್ರೀದೇವಿ ಬಿರಾದಾರ, ಶಿವಗಂಗಾ ಬಿರಾದಾರ, ಅವ್ವಣ್ಣವ್ವ ಗಾಣಿಗೇರ, ಭಾರತಿ ಹೂಗಾರ, ಮಲ್ಲಿಕಾರ್ಜುನ ಪಾಲ್ಗೊಂಡಿದ್ದರು.