ಮಡಿಕೇರಿ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಅವರು ಜಿಲ್ಲೆಯ ಅರ್ಹ ವಿಕಲಚೇತನರಿಗೆ ಗಾಲಿ ಕುರ್ಚಿ ಹಾಗೂ ಶ್ರವಣ ಸಾಧನಗಳನ್ನು ನಗರದ ಕೋಟೆ ಆವರಣದಲ್ಲಿ ಶುಕ್ರವಾರ ವಿತರಣೆ ಮಾಡಿದರು.
ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಯ ಜಿಲ್ಲಾ ವಿಕಲಚೇತನರ ಅಭಿವೃದ್ಧಿ ಇಲಾಖೆ ವತಿಯಿಂದ ಈ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಕುಶಾಲಪ್ಪ ಅವರು, ವಿಕಲಚೇತನರಿಗೆ ಬದುಕಿನ ಮಟ್ಟ ಸುಧಾರಿಸಲಿ ಎಂದು ಹಾರೈಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ವಿಜಯಲಕ್ಷ್ಮಿ ಶೆಣೈ ಮಾತನಾಡಿ, ಒಂದು ಗಾಲಿಚಕ್ರದ ಬೆಲೆ ರೂ 7,425, ಒಟ್ಟು 13 ಗಾಲಿ ಕುರ್ಚಿಗೆ ರೂ 96,525 ವೆಚ್ಚವಾಗಿದೆ. ಹಾಗೆಯೇ ಒಂದು ಶ್ರವಣ ಸಾಧನಕ್ಕೆ ರೂ 10,200 ವೆಚ್ಚ ತಗುಲಿದ್ದು, 9 ಶ್ರವಣ ಸಾಧನಕ್ಕೆ 91,800 ರೂ. ವೆಚ್ಚವಾಗಿದೆ ಎಂದು ಅವರು ತಿಳಿಸಿದರು.
ಈ ಸಂಧರ್ಭದಲ್ಲಿ ಮಡಿಕೇರಿ ತಾಲ್ಲೂಕು ಎಂಪಿಎಂಸಿ ಅಧ್ಯಕ್ಷರಾದ ಬೆಲ್ಲು ಸೋಮಯ್ಯ, ರಂಗ ಕಲಾವಿದ ಅಡ್ಡಂಡ ಕಾರ್ಯಪ್ಪ, ಜಿಲ್ಲಾ ವಿಕಲಚೇತನಾಧಿಕಾರಿ ನೀರಬಿದಿರೆ ನಾರಾಯಣ ಮತ್ತಿತರು ಇದ್ದರು.