ವಿಜಾಪುರ: `ರೋಗಿಗಳು ಮತ್ತು ವೈದ್ಯರ ನಡುವಿನ ಸೇತುವೆಯಂತೆ ಕೆಲಸ ಮಾಡುವುದರ ಜೊತೆಗೆ ರೋಗ ಪತ್ತೆಯಲ್ಲಿ ರೋಗ ನಿಧಾನ ಶಾಸ್ತ್ರಜ್ಞರ (ಪೆಥಾಲಜಿಸ್ಟ್) ಪಾತ್ರ ಪ್ರಮುಖವಾದುದು' ಎಂದು ಜಲಸಂಪನ್ಮೂಲ ಸಚಿವ, ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಎಂ.ಬಿ. ಪಾಟೀಲ ಹೇಳಿದರು.
ಇಲ್ಲಿಯ ಬಿ.ಎಲ್.ಡಿ.ಇ. ಡೀಮ್ಡ ವಿಶ್ವವಿದ್ಯಾಲಯದ ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ 40ನೇ ರಾಜ್ಯ ಪೆಥಾಲಜಿ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
`ರೋಗ ನಿದಾನ ಶಾಸ್ತ್ರಜ್ಞರು ಕೇವಲ ರೋಗಿಗಳ ತಪಾಸಣೆ, ರೋಗ ಪತ್ತೆ ಮಾಡುವುದಕ್ಕಷ್ಟೇ ಸೀಮಿತವಾಗಬಾರದು. ವೈದ್ಯ ಕೀಯ ಕ್ಷೇತ್ರದಲ್ಲಿ ಹೊಸ ಉದ್ಯೋಗಾವಕಾಶಗಳು, ಹೊಸ ತಂತ್ರಜ್ಞಾನ ಸೃಷ್ಟಿಗೆ ಗಮನ ಹರಿಸಬೇಕು' ಎಂದು ಸಮ್ಮೇಳನ ಉದ್ಘಾಟಿಸಿದ ಬೆಂಗಳೂರು ನಿಮ್ಹೋನ್ಸ್ನ ಡಾ.ಪಿ.ಕೆ. ಶಂಕರ ಹೇಳಿದರು.
`ಮನುಷ್ಯನ ದೇಹದ ಕಿಡ್ನಿ, ಲಿವರ್ ಮತ್ತಿತರ ಅಂಗಾಂಗಗಳನ್ನು ಪಡೆದ ಎಂಟು ಗಂಟೆಯ ಅವಧಿಯಲ್ಲಿ ಅವುಗಳನ್ನು ಬೇರೊಬ್ಬರಿಗೆ ಜೋಡಿಸಬೇಕಿದೆ. ಇದು ವೈದ್ಯರಿಗೆ ಸವಾಲಾಗಿದ್ದು, ಮರು ಜೋಡಣೆಯ ಅವಧಿಯನ್ನು 24 ಗಂಟೆಗಳಿಗೆ ವಿಸ್ತರಿಸುವ ಕುರಿತಂತೆ ವೈದ್ಯಕೀಯ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದಲ್ಲಿ ಹೆಚ್ಚಿನ ಉಪಯೋಗ ಆಗುತ್ತದೆ' ಎಂದರು.
ಪೆಥಾಲಜಿಸ್ಟ್ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಾ.ಎನ್. ಜಯರಾಮ್, ಡಾ.ಬಿ.ಜಿ. ಮೂಲಿಮನಿ, ಬಿ.ಆರ್. ಪಾಟೀಲ ಲಿಂಗದಳ್ಳಿ, ಡಾ.ಜೆ.ಜಿ. ಅಂಬೇಕರ, ಡಾ.ಎಸ್.ಬಿ. ಹಿಪ್ಪರಗಿ, ಡಾ.ತೇಜಸ್ವಿನಿ ವಲ್ಲಭ ವೇದಿಕೆಯಲ್ಲಿದ್ದರು.
ಡಾ.ಎಂ.ಎಸ್. ಬಿರಾದಾರ ಸ್ವಾಗತಿಸಿದರು. ಡಾ.ಬಿ.ಆರ್. ಯಲಿಕರ ಪ್ರಾಸ್ತಾವಿಕವಾಗಿ ಮಾತನಾಡಿದರು.