ಸಿರುಗುಪ್ಪ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಬತ್ತಕ್ಕೆ ಪರ್ಯಾಯ ಬೆಳೆಯಾಗಿ ಅಂಗಾಂಶ ಬಾಳೆ ಕೃಷಿಯನ್ನು ಹೆಚ್ಚಿನ ಪ್ರಮಾಣದಲ್ಲಿ ರೈತರು ಬೆಳೆಯಲು ಒಲವು ತೋರ ಬೇಕೆಂದು ಜಿಲ್ಲಾ ಪಂಚಾಯ್ತಿಯ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಸೋಮಪ್ಪ ಸಲಹೆ ಮಾಡಿದರು.
ತಾಲ್ಲೂಕಿನ ದೇಶನೂರು ಗ್ರಾಮದ ಪ್ರಗತಿಪರ ರೈತ ಲಕ್ಷ್ಮಣ ಎಂಬುವವರ ಜಮೀನಿನಲ್ಲಿ ತೋಟಗಾರಿಕೆ ಇಲಾಖೆ ಗುರುವಾರ ಏರ್ಪಡಿಸಿದ ಅಂಗಾಂಶ ಕೃಷಿ ಪದ್ದತಿಯಲ್ಲಿ ಬೆಳೆದ ಬಾಳೆ ಬೆಳೆ ಕ್ಷೇತ್ರೋತ್ಸವದಲ್ಲಿ ಮಾತನಾಡಿದರು.
ರೈತರು ಆರ್ಥಿಕವಾಗಿ ಸಬಲರಾಗಲು ತೋಟಗಾರಿಕೆ ಬೆಳೆಯಿಂದ ಹೆಚ್ಚಿನ ನಿರಂತರ ಆದಾಯ ಪಡೆಯಬಹು ದಾಗಿದೆ ಎಂದರು.
ರೈತರು ಕೇವಲ ಸಾಂಪ್ರದಾಯಿಕ ಕೃಷಿ ಪದ್ದತಿಯಲ್ಲಿ ಬತ್ತ ಬೆಳೆಗೆ ಸೀಮಿತವಾಗಿದ್ದಾರೆ, ಈ ಬತ್ತ ಬೆಳೆಯ ಕೃಷಿ ವೆಚ್ಚ ದುಬಾರಿಯಾಗಿ, ಲಾಭಾಂಶ ಕಡಿಮೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಬಿ.ಬಿ.ಬನ್ನೇಪ್ಪ, ಇಲ್ಲಿಯ ಕೃಷಿ ಸಂಶೋಧನ ಕೇಂದ್ರದ ಮುಖ್ಯಸ್ಥ ಬಸವಣ್ಣೆಪ್ಪ, ಸಹಾಯಕ ಕೃಷಿ ಅಧಿಕಾರಿ ಸಿ.ಆರ್.ಚಂದ್ರಶೇಖರ್, ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಬಿ.ಕೆ.ಓಬಣ್ಣ, ಅಂಗಾಂಶ ಬಾಳೆಯಲ್ಲಿ ಸಾವಯವ ಗೊಬ್ಬರದ ಬಳಕೆ, ಮಿತ ನೀರು ಬಳಕೆಯಿಂದ ತೋಟಗಾರಿಕೆ, ತರಕಾರಿ ಬೆಳೆಗಳನ್ನು ಬೆಳೆಯುವ ಬಗ್ಗೆ ರೈತರಿಗೆ ಸಲಹೆ ಸೂಚನೆ ನೀಡಿದರು.
ತಾ.ಪಂ.ಸದಸ್ಯ ಈರಣ್ಣ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಾರೆಪ್ಪ ಮತ್ತು ಪ್ರಗತಿಪರ ರೈತರು ಇದ್ದರು.
ತನ್ನ ಒಂದು ಎಕರೆ ಜಮೀನಿನಲ್ಲಿ ಬಾಳೆ ಬೆಳೆದ ರೈತ ಲಕ್ಷ್ಮಣನು ಪ್ರಾತ್ಯಕ್ಷಿಕೆಯಲ್ಲಿ ಅಂಗಾಂಶ ಬಾಳೆಯ 1200 ಸಸಿಗಳನ್ನು ನಾಟಿ ಮಾಡಿದ್ದೇನೆ, ಬೆಳೆ ಸಮೃದ್ಧವಾಗಿ ಬೆಳೆದು ಒಂದು ಗಿಡಕ್ಕೆ ಒಂದು ಬಾಳೆಗೊನೆ 30 ರಿಂದ 35 ಕೆಜಿಯಷ್ಟು ತೂಕ ಹೊಂದಿದ್ದು, ಈ ಬೆಳೆಯಲ್ಲಿ ಎಕರೆಗೆ 3.60 ಟನ್ ನಿಂದ 4.20 ಟನ್ನಷ್ಟು ಬೆಳೆ ಬರುವ ಸಾಧ್ಯತೆ ಇದ್ದು 2 ರಿಂದ 3 ಲಕ್ಷ ರೂಪಾಯಿಗಳ ನಿವ್ವಳ ಲಾಭ ಪಡೆಯಬಹುದು ಎಂದು ಸಂತಸ ಹಂಚಿಕೊಂಡರು.