ಹುಬ್ಬಳ್ಳಿ: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಚೆ ಇಲಾಖೆಯ ಗ್ರಾಮೀಣ ನೌಕರರು ಗ್ರಾಮೀಣ ಡಾಕ್ ಸೇವಕರ ಸಂಘಟನೆ ನೇತೃತ್ವದಲ್ಲಿ ಶುಕ್ರವಾರ ಪ್ರಧಾನ ಅಂಚೆ ಕಚೇರಿ ಎದುರು ಧರಣಿ ನಡೆಸಿದರು.
ಐದು ತಾಸಿಗೂ ಹೆಚ್ಚು ಕಾಲ ಸೇವೆ ಸಲ್ಲಿಸುತ್ತಿರುವ ಗ್ರಾಮೀಣ ಭಾಗದ ನೌಕರರನ್ನು ಸುಪ್ರೀಂ ಕೋರ್ಟ್ ಆದೇಶ ಹಾಗೂ ತಲವಾರ್ ಸಮಿತಿ ವರದಿಯ ಅನುಸಾರ ಕಾಯಂ ನೌಕರರನ್ನಾಗಿ ನೇಮಕ ಮಾಡಿಕೊಳ್ಳಬೇಕು. ಪಿಎಲ್ಬಿ ಬೊನಸ್ ಅನ್ನು ನೀಡಬೇಕು.
ಅಂಚೆ ಪೇದೆ, ಮೇಲ್ ಗಾರ್ಡ್ ಮತ್ತು ಜಿಡಿಎಸ್ ನೌಕರರನ್ನು ಸೇವಾ ಜೇಷ್ಠತೆಯ ಆಧಾರದ ಮೇಲೆ ನೇಮಕ ಮಾಡಿಕೊಳ್ಳಬೇಕು. ದಿನಗೂಲಿ ನೌಕರರಿಗೆ 2006ರಿಂದ ಅನ್ವಯ ವಾಗುವಂತೆ ವೇತನ ಪರಿಷ್ಕರಿಸಿ ಸೌಲಭ್ಯ ವಿಸ್ತರಿಸಬೇಕು ಎಂದು ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳ ಲಾಗಿದೆ ಎಂದು ಧರಣಿ ನಿರತರು ತಿಳಿಸಿದರು.
ಸಂಘಟನೆಯ ಮುಖಂಡ ಎಂ.ಬಿ. ಅವತಿ, ಹುಬ್ಬಳ್ಳಿ ವಿಭಾಗದ ಸಂಘಟನಾ ಕಾರ್ಯದರ್ಶಿಗಳಾದ ಐ.ಪಿ. ಹೆಬ್ಬಳ್ಳಿ, ಎಫ್.ಕೆ. ಕಟ್ಟಿಮನಿ, ಜಿ.ಬಿ. ಭೈರಪ್ಪಗೌಡರ, ಗೋಪಾಲ್ ಎಂ.ವಿ. ಮುಸಳೆ, ಐ.ಎಂ. ಡೋಣೂರ, ಕೆ.ಬಿ. ಹೊಂಬಳ, ಸಂದೀಪ ಕೊಡಿಯಾ, ಎಲ್ಜಿ ಮಳಲಿ ಇತರರು ಪಾಲ್ಗೊಂಡಿದ್ದರು.