ನವದೆಹಲಿ (ಐಎಎನ್ಎಸ್/ಪಿಟಿಐ): ಅಂಡಮಾನ ನಿಕೋಬಾರ್ ದ್ವೀಪಗಳಿಗೆ ಪ್ರವಾಸಕ್ಕೆ ಬಂದಿದ್ದ ವಿದೇಶಿ ಪ್ರವಾಸಿಗರ ಮುಂದೆ ಬುಡಕಟ್ಟು ಮಹಿಳೆಯರಿಂದ ಅರೆ ಬೆತ್ತಲೆ ನೃತ್ಯ ಮಾಡಿಸಿದ ಘಟನೆ ಸಂಬಂಧ ಗುರುವಾರ ಕೇಂದ್ರ ಸರ್ಕಾರ ಅಲ್ಲಿನ ಆಡಳಿತದಿಂದ ವಿವರಣೆ ಕೋರಿದೆ.
ಆದರೆ ಇಲ್ಲಿನ ಆಡಳಿತ, ಈ ಘಟನೆಯ ಚಿತ್ರಣಮಾಡಿದ ಟಿವಿ ಛಾಯಾಗ್ರಾಹಕನ ವಿರುದ್ಧ ಕ್ರಮ ಜರುಗಿಸಲು ಮುಂದಾಗಿದೆ.
ಇತ್ತೀಚೆಗೆ ಈ ವಾಹಿನಿಗಳು ಹಾಗೂ ದಿನಪತ್ರಿಕೆಗಳು, ಅಂಡಮಾನ್ ದ್ವೀಪದ ಜಾರ್ವಾ ಬುಡಕಟ್ಟು ಮಹಿಳೆಯರ ಅರೆ ಬೆತ್ತಲೆ ನೃತ್ಯದ ಕೆಲವು ತುಣುಕುಗಳನ್ನು ಪ್ರಚುರಪಡಿಸಿ, ಇದರಲ್ಲಿ ಅಲ್ಲಿನ ಆಡಳಿತ ಮತ್ತು ಪೊಲೀಸರೂ ಭಾಗಿಯಾಗಿದ್ದಾರೆಂದು ಆರೋಪಿಸಿದ್ದವು.
ಇದಕ್ಕೆ ಪ್ರತಿಕ್ರಿಯಿಸಿರುವ ಬುಡಕಟ್ಟು ವ್ಯವಹಾರ ಸಚಿವ ಕೆ.ಪಿ.ಸಿಂಗ್ ದಿಯೋ ಅವರು, ~ಇದೊಂದು ತೀರಾ ಅಸಹ್ಯಕರ ಹಾಗೂ ಜಿಗುಪ್ಸೆದಾಯಕ ಕೃತ್ಯವಾಗಿದ್ದು, ಈ ಸಂಬಂಧ ತನಿಖೆ ನಡೆಸಿ ಈ ಘಟನೆಗೆ ಕಾರಣರಾದ ತಪ್ಪಿತಸ್ಥರಿಗೆ ಗರಿಷ್ಠ ಪ್ರಮಾಣದ ಶಿಕ್ಷೆಯಾಗುವಂತೆ ನೋಡಿಕೊಳ್ಳಲಾಗುವುದು~ ಎಂದು ಹೇಳಿದ್ದಾರೆ.
~ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ~ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರೂ ತಿಳಿಸಿದ್ದಾರೆ.
ಜಾರ್ವಾ ಬುಡಕಟ್ಟು ಇಲ್ಲಿ ಸಾವಿರಾರು ವರ್ಷಗಳಿಂದ ಶಾಂತಿಯುತ ಜೀವನ ನಡೆಸುತ್ತಿದೆ. ಈಗ ಪ್ರವಾಸೋದ್ಯಮದ ಹೆಸರಿನಲ್ಲಿ ಪ್ರವಾಸಿ ಕಂಪೆನಿಗಳು ಅಲ್ಲಿಗೆ ಲಗ್ಗೆ ಇಟ್ಟು, ಅರೆ ಬೆತ್ತಲೆಯಲ್ಲಿರುವ ಈ ಬುಡಕಟ್ಟಿನ ಮಹಿಳೆಯರಿಗೆ ಪ್ರವಾಸಿಗರ ಮುಂದೆ ನೃತ್ಯ ಮಾಡುವಂತೆ ಒತ್ತಾಯ ಹೇರಿ ಶೋಷಣೆ ಮಾಡುತ್ತಿವೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.