ನವದೆಹಲಿ (ಪಿಟಿಐ): ಅರಬ್ಬಿ ಸಮುದ್ರದಲ್ಲಿ `ಚೀನಾದ ಉಪಸ್ಥಿತಿ~ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಆಯಕಟ್ಟಿನ ತಾಣವಾದ ಅಂಡಮಾನ್- ನಿಕೊಬಾರ್ ಮತ್ತು ಲಕ್ಷದ್ವೀಪಗಳಲ್ಲಿ ಕೇಂದ್ರ ಸರ್ಕಾರ ಭದ್ರತೆ ಹೆಚ್ಚಿಸಿದೆ.
`ಅಂಡಮಾನ್- ನಿಕೊಬಾರ್ ಮತ್ತು ಲಕ್ಷದ್ವೀಪಗಳ ಕಾರ್ಯತಂತ್ರ ಪ್ರಾಮುಖ್ಯ ಎಷ್ಟೆಂಬುದು ಸರ್ಕಾರಕ್ಕೆ ಗೊತ್ತು. ಈ ಕೇಂದ್ರಾಡಳಿತ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಂಡಿದೆ~ ಎಂದು ಗೃಹ ಸಚಿವ ಪಿ.ಚಿದಂಬರಂ ಶುಕ್ರವಾರ ತಿಳಿಸಿದ್ದಾರೆ.
`ಕಾರ್ಯತಂತ್ರ ಉದ್ದೇಶ ಖಾತ್ರಿಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಅಂಡಮಾನ್- ನಿಕೊಬಾರ್ನಲ್ಲಿ ಈಗಾಗಲೇ ಸಂಯುಕ್ತ ಕಮಾಂಡ್ನ್ನು ಸ್ಥಾಪಿಸಲಾಗಿದೆ. ಜತೆಗೆ ಈ ಆಯಕಟ್ಟಿನ ದ್ವೀಪಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ~ ಎಂದು ಗೃಹ ಇಲಾಖೆ ಸಮಾಲೋಚನಾ ಸಮಿತಿ ಸಭೆಯಲ್ಲಿ ಅವರು ತಿಳಿಸಿದರು.
`ನಮ್ಮ ನೆರೆ ರಾಷ್ಟ್ರಗಳಾದ ಮ್ಯಾನ್ಮಾರ್, ಶ್ರೀಲಂಕಾ ಮತ್ತು ಪಾಕಿಸ್ತಾನಗಳಲ್ಲಿ ಚೀನಾವು ಬಂದರುಗಳ ನಿರ್ಮಾಣದಲ್ಲಿ ನಿರತವಾಗಿರುವುದನ್ನು ಸರ್ಕಾರ ಕೂಲಂಕಷವಾಗಿ ಪರಿಶೀಲಿಸುತ್ತಿದೆ. ಅಂಡಮಾನ್- ನಿಕೊಬಾರ್ ಮತ್ತು ಲಕ್ಷದ್ವೀಪಗಳಲ್ಲಿ ಸಂಪರ್ಕವೇ ಬಹು ಮುಖ್ಯ ತೊಡಕಾಗಿದ್ದು, ಇದರ ನಿವಾರಣೆಗೆ ಪ್ರಯತ್ನ ನಡೆದಿದೆ~ ಎಂದು ಚಿದಂಬರಂ ವಿವರಿಸಿದರು.