ಮಸ್ಕಿ: ಜಾಗತಿಕರಣ, ಖಾಸಗಿಕರಣ ಹಾಗೂ ಉದಾರೀಕರಣದಿಂದ ಆಂತಃಕರಣ ದೂರವಾಗುತ್ತಿರುವುದು ವಿಷಾದನೀಯ ಎಂದು ಸಾಹಿತಿ ಡಾ. ಸ್ವಾಮಿರಾವ್ ಕುಲಕರ್ಣಿ ಶನಿವಾರ ಇಲ್ಲಿ ತಿಳಿಸಿದರು.
ಮಸ್ಕಿಯ ಭ್ರಮರಾಂಬ ದೇವಸ್ಥಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಸ್ಕಿ ಘಟಕ ಉದ್ಘಾಟಿಸಿ ಮಾತನಾಡಿ, ಕಳೆದ ದಶಕಗಳಿಂದಿನ ಸಂದರ್ಭ ಹೋಲಿಸಿದರೆ ಅಂದು ಸೌಲಭ್ಯದ ಕೊರತೆ ಇತ್ತು. ಆದರೆ, ಬದುಕು ನೆಮ್ಮದಿಯಿಂದ ಕೂಡಿತ್ತು. ಆದರೆ, ಇಂದು ಸೌಲಭ್ಯ ಬೇಕಾದಷ್ಟು ಇದ್ದರೂ ನೆಮ್ಮದಿ ಇಲ್ಲವಾಗಿದೆ ಎಂದರು.
ಇಂತಹ ಸಮಯದಲ್ಲಿ ಸಾಹಿತ್ಯ ಅಭ್ಯಾಸ, ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ನೆಮ್ಮದಿಯನ್ನು, ಬದುಕಿನ ಪರಿವರ್ತನೆಯನ್ನು ಮಾಡಿಕೊಳ್ಳಲು ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.
ಪರಿಷತ್ತಿನ ಮಸ್ಕಿ ಘಟಕದ ಅಧ್ಯಕ್ಷ ಗುಂಡುರಾವ್ ದೇಸಾಯಿ ಪ್ರಸ್ತಾವಿಕ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಮಹಾದೇವಪ್ಪಗೌಡ ಪೊ. ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷ ಅಮರೇಶ ಮಸ್ಕಿ, ಎಪಿಎಂಸಿ ಅಧ್ಯಕ್ಷ ಮಂಜುನಾಥ ಪಾಟೀಲ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಹಾಂತೇಶ ಮಸ್ಕಿ, ತಾಲ್ಲೂಕು ಪಂಚಾಯಿತಿ ಸದಸ್ಯ ನೀಲಮ್ಮ ಮರಳದ, ಹನುಮಂತಪ್ಪ ಮೋಚಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ವಿನೋದ ಹಳ್ಳಿ ಸ್ವಾಗತಿಸಿದರು, ಅಡೆವೇಶ ಬುಳ್ಳಾ ವಂದಿಸಿದರು. ವಿಜಯಲಕ್ಷ್ಮೀ ಕಂದಗಲ್ ನಿರೂಪಿಸಿದರು.
ಇದೇ ಸಂದಭಧಲ್ಲಿ ಡಾ. ಸ್ವಾಮಿರಾವ್ ಕುಲಕರ್ಣಿ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಮರೇಶ ಮಸ್ಕಿ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ಮಸ್ಕಿ ಘಟಕ ವತಿಯಿಂದ ಸನ್ಮಾನಿಸಲಾಯಿತು.