ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರಗಂಗೆಯಲ್ಲಿ ಭಕ್ತರ ಜಾತ್ರೆ

Last Updated 21 ನವೆಂಬರ್ 2011, 19:30 IST
ಅಕ್ಷರ ಗಾತ್ರ

 ಕೋಲಾರ: ನಗರ ಮತ್ತು ಸುತ್ತಮುತ್ತಲಿನ ಸಾವಿರಾರು ಶಿವಭಕ್ತರು ಕಾರ್ತಿಕ ಮಾಸದ ಕಡೆಯ ಸೋಮವಾರದ ಪ್ರಯುಕ್ತ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ನಗರದ ಹೊರವಲಯದಲ್ಲಿರುವ ಅಂತರಗಂಗೆ ಬೆಟ್ಟದಲ್ಲಿ ಸಾವಿರಾರು ಭಕ್ತರ ಜಾತ್ರೆಯೇ ನೆರೆದಿತ್ತು. ಇಲ್ಲಿನ ಕಾಶಿ ವಿಶ್ವೇಶ್ವರನ ಗುಡಿಯಲ್ಲಿ ಬೆಳಗಿನ ಜಾವದಿಂದಲೇ ವಿಶೇಷ ಪೂಜೆ ನಡೆಯಿತು.

ಕಾರ್ತೀಕ ಮಾಸದ ಕಡೆಯ ಸೋಮವಾರದ ಪ್ರಯುಕ್ತ ಅಂತರಗಂಗೆಯಲ್ಲಿ ವಿಶೇಷ ಪೂಜೆ ಮತ್ತು ಪಂಚಲಿಂಗ ದರ್ಶನವನ್ನು ಏರ್ಪಡಿಸಲಾಗಿತ್ತು. ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಭಕ್ತರು ಭಕ್ತಿ-ಶ್ರದ್ಧೆಯಿಂದ ಬೆಟ್ಟ ಹತ್ತಿ ಪೂಜೆ ಸಲ್ಲಿಸಿದರು.
 
ಬೆಟ್ಟದ ಮೇಲಿನ ಕೊಳದಲ್ಲಿ ಮಿಂದು ಕಾಶಿ ವಿಶ್ವೇಶ್ವರ ಲಿಂಗವೂ ಸೇರಿದಂತೆ ಪಂಚಲಿಂಗ ದರ್ಶನ ಪಡೆದರು. ಕೊಳದ ಮೇಲಿರುವ ಬಸವನ ಬಾಯಿಂದ ಬರುವ `ಪವಿತ್ರ ಜಲ~ವನ್ನು ಮನೆಗಳಿಗೆ ಕೊಂಡೊಯ್ದರು. ಹಲವು ದಾನಿಗಳು, ಭಜರಂಗ ದಳದ ಕಾರ್ಯಕರ್ತರು ಭಕ್ತರಿಗೆ ಉಚಿತ ಪ್ರಸಾದ ಹಂಚಿದರು.

ನಗರದ ಹೊಸ ಬಸ್ ನಿಲ್ದಾಣ ವೃತ್ತದಿಂದ ಬೆಟ್ಟದವರೆಗೆ, ವಿಶೇಷವಾಗಿ ಮಹಿಳೆಯರು, ಮಕ್ಕಳಿಗೆಂದು ಭಜರಂಗದಳ ಉಚಿತ ವಾಹನ ಸೌಲಭ್ಯ ಕಲ್ಪಿಸಿತ್ತು. ಅಂತರಗಂಗೆ ದಾರಿಯಲ್ಲಿ ಕೇಸರಿ ಬಾವುಟಗಳು ರಾರಾಜಿಸಿದವು. ನಗರದ ಸೋಮೇಶ್ವರ ದೇವಾಲಯ, ದೊಡ್ಡಪೇಟೆ ನಂಜುಂಡೇಶ್ವರ ದೇವಾಲಯ, ಕಾಳಮ್ಮ ಗುಡಿಯಲ್ಲಿರುವ ಕಮ್ಮಟೇಶ್ವರ, ಶಿವಗಿರಿ ಮಠದಲ್ಲಿ ವಿಶೇಷ ಅಲಂಕಾರ, ಪೂಜೆ ಏರ್ಪಡಿಸಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT