ಇಳಕಲ್ (ಬಾಗಲಕೋಟೆ ಜಿಲ್ಲೆ): ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯ ವಿವಿಧೆಡೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ 8 ಜನ ಅಂತರರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಇಲ್ಲಿಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರಿಂದ 1.5 ಕೆ.ಜಿ. ಚಿನ್ನ, 3 ಕೆ.ಜಿ. ಬೆಳ್ಳಿ ಸೇರಿ 46.82 ಲಕ್ಷ ರೂ.ಗಳ ಮೊತ್ತದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ., ಬಂಧಿತರ ಹೆಸರಿನಲ್ಲಿದ್ದ 10 ಲಕ್ಷ ರೂ.ಗಳ ಬ್ಯಾಂಕ್ ಠೇವಣೆಯನ್ನು ಸ್ಥಗಿತಗೊಳಿ ಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈಶ್ವರಚಂದ್ರ ವಿದ್ಯಾ ಸಾಗರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತರು ಮೂಲತಃ ವಿಜಾಪುರ ಜಿಲ್ಲೆ ಇಂಡಿ ತಾಲ್ಲೂಕಿನ ಹಿರೇಬೇವನೂರ ಗ್ರಾಮದವರಾಗಿದ್ದು, ಸದ್ಯ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆ, ಮಿರಜ ತಾಲ್ಲೂಕಿನ ಅರಗ ಹಾಗೂ ಸಗರ ಗ್ರಾಮದಲ್ಲಿ ನೆಲೆಸಿದ್ದಾರೆ. ಜುಲೈ 13 ರಂದು ಶಿವು ಬೋಸ್ಲೆ (27), ಕಾಶಿನಾಥ (ನಿಕ್ಯಾ) ಪವಾರ (25), ಈಗ್ನೇಶ್(ಬಾಪ್ಯಾ) ಭೋಸ್ಲೆ (25), ರಂಗೀಲಾ(ರಂಗ್ಯಾ) ಪವಾರ (23) ಅವರನ್ನು ಇಳಕಲ್ ಹಾಗೂ ಹುನಗುಂದ ಪೋಲಿಸರು ಬಂಧಿಸಿದ್ದಾರೆ.
ನಾಲ್ವರ ವಿಚಾರಣೆಯ ಕಾಲಕ್ಕೆ ಕಳ್ಳತನದಲ್ಲಿ ಪಾಲ್ಗೊಂಡ ಇತರರ ಬಗ್ಗೆ ಮಾಹಿತಿ ಸಿಕ್ಕಿತು. ನಂತರ ಇಂಡಿ ತಾಲ್ಲೂಕಿನ ಹಿರೇಬೇವನೂರಿನ ಮೇಜಿಸ್ರಾವ್ ಭೋಸ್ಲೆ, ಈಶ್ವರ ಭೋಸ್ಲೆ, ಸಜುನು ಹರನಶಿಕಾರಿ, ಕಾಶೀನಾಥ ಭೋಸ್ಲೆ ಅವರನ್ನು ಬಂಧಿಸಲಾಯಿತು ಎಂದು ತಿಳಿಸಿದರು.
ಮುಧೋಳ ಹೊರತುಪಡಿಸಿ ಜಿಲ್ಲೆಯ 5 ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಒಟ್ಟು 44 ಕಳ್ಳತನ ಪ್ರಕರಣಗಳಲ್ಲಿ ಬಂಧಿತರು ಭಾಗಿಯಾಗಿದ್ದು, ಹುನಗುಂದ ವೃತ್ತ ವ್ಯಾಪ್ತಿಯಲ್ಲಿ ಗರಿಷ್ಠ 18 ಕಳ್ಳತನ ಮಾಡಿದ್ದಾರೆ. ಬಾದಾಮಿ ಹಾಗೂ ಬಾಗಲಕೋಟ ವೃತ್ತದ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮೌಲ್ಯದ ಬಂಗಾರ, ಬೆಳ್ಳಿ ಕದ್ದಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದರು. ಜುಲೈ 13 ರಂದು ಇಳಕಲ್ನಲ್ಲಿ ಬೆಳಗಿನ ಜಾವ ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಿಸಿದಾಗ ಕಳ್ಳರ ಜಾಲ ಬಯಲಾಯಿತು.