ಸುರಪುರ: ಅಂತರ್ಜಾಲ (ಇಂಟರ್ನೆಟ್) ಇಂದು ಅತಿ ಅವಶ್ಯವಾಗಿದೆ. ಇದು ಇಲ್ಲದಿದ್ದರೆ ಜಗತ್ತಿನ ಚಟುವಟಿಕೆಗಳು ಸ್ಥಗಿತಗೊಳ್ಳುತ್ತವೆ. ಐ. ಟಿ. ಕ್ಷೇತ್ರ ಈಗ ಹೆಚ್ಚು ವಿಸ್ತಾರವಾಗಿದೆ. ಪ್ರತಿ ಶಾಲಾ, ಕಾಲೇಜುಗಳಲ್ಲಿ ಈ ಬಗ್ಗೆ ಪಠ್ಯಕ್ರಮ ಅಳವಡಿಸಲಾಗಿದೆ. ಅಂತರ್ಜಾಲದಿಂದ ಅಭೂತಪೂರ್ವ ಅಭಿವೃದ್ಧಿಯೂ ಆಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ. ವ್ಹಿ. ಕೆಂಪರಂಗಯ್ಯ ಪ್ರತಿಪಾದಿಸಿದರು.
ಇಲ್ಲಿನ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಅಂತರ್ಜಾಲ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂತರಜಾಲದಿಂದ ಸಾಕಷ್ಟು ಉಪಯೋಗಗಳಿವೆ. ಹಾಗೆ ಸಹಜವಾಗಿ ದುಷ್ಪರಿಣಾಮಗಳು ಇವೆ. ಇ-ಮೇಲ್, ಇ-ಟೆಂಡರ್, ಇ-ಫೈಲ್, ವಿಡಿಯೋ ಕಾನಫರೆನ್ಸ್... ಹೀಗೆ ಪ್ರಯೋಜನಗಳು ಇವೆ. ಪಾಲಕರು ತಮ್ಮ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಹಂತದಲ್ಲೆ ಅಂತರ್ಜಾಲದ ಬಗ್ಗೆ ಮಾಹಿತಿ ನೀಡಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಉಪಪ್ರಾಚಾರ್ಯ ಶ್ರೀನಿವಾಸ ಜಾಲವಾದಿ ಮಾತನಾಡಿ, ಇಂದು ಭಾರತ ಅಂತರ್ಜಾಲದಿಂದ ದೊಡ್ಡ ಸಾಧನೆ ಮಾಡಿದೆ. ಬೆಂಗಳೂರು ದೇಶದ ಐ.ಟಿ. ರಾಜಧಾನಿಯೆಂದು ಕರೆಸಿಕೊಳ್ಳುತ್ತಿದೆ. ನಮ್ಮ ರಾಜ್ಯದ ಸಾಫ್ಟ್ವೆರ್ ಎಂಜಿನಿಯರ್ಗಳಿಗೆ ವಿದೇಶದಲ್ಲಿ ಭಾರಿ ಬೇಡಿಕೆಯಿದೆ. ವಿದ್ಯಾರ್ಥಿಗಳು ಇಂತಹ ಮೇಳಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಿಸಿಯೂಟದ ಸಹಾಯಕ ನಿರ್ದೇಶಕ ಆರ್. ಎಸ್. ಕರಡ್ಡಿ, ಸರ್ವೋದಯ ಪ್ರಾಥಮಿಕ ಶಾಲೆಯ ಮುಖ್ಯ ಗುರು ಶಿವಕುಮಾರ ಮಸ್ಕಿ, ಸಹ ಶಿಕ್ಷಕ ಎಸ್. ಎಸ್. ಕರಿಕಬ್ಬಿ ವೇದಿಕೆಯ ಮೇಲಿದ್ದರು.
ದಿವ್ಯಾಭಾರತಿ ಪ್ರಾರ್ಥಿಸಿದರು. ಬಸವರಾಜ ಗೋಗಿ ಸ್ವಾಗತಿಸಿದರು. ಹಸೀನಾಬೇಗಂ ನಿರೂಪಿಸಿದರು. ಶಿವಲಿಂಗಯ್ಯ ಹಿರೇಮಠ ವಂದಿಸಿದರು.
ಶಿಕ್ಷಕರಾದ ನಿಂಗಪ್ಪ ಪುಜಾರಿ, ಭಾರತಿ, ಕಾಳಪ್ಪ, ಶರಣಮ್ಮ, ರುದ್ರೇಶ, ಮಂಜುಳಾ, ವೆಂಕಟಲಕ್ಷ್ಮಿ, ಶಬಾನಾ ಬಾನು ಶಬಾನಾ ಬೇಗಂ ಉಪಸ್ಥಿತರಿದ್ದರು.
ಮೂರು ದಿನಗಳವರೆಗೆ ನಡೆಯುವ ಮೇಳದಲ್ಲಿ ಸುರಪುರ, ರಂಗಂಪೇಟೆ, ಮಾಲಗತ್ತಿ, ದೇವರಗೋನಾಲ, ಸುಗೂರ, ಬಾಚಿಮಟ್ಟಿ, ಲಕ್ಷ್ಮೀಪುರ, ದೇವಪುರ, ತಿಂಥಣಿ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.