ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧಕಾರದಲ್ಲೊಂದು ಆತ್ಮವಿಶ್ವಾಸದ ಈಜು

Last Updated 20 ಡಿಸೆಂಬರ್ 2010, 13:15 IST
ಅಕ್ಷರ ಗಾತ್ರ

‘ಮಾನವರಾಗಿ ಹುಟ್ಟಿದ ಮೇಲೆ ಮಾನವೀಯತೆಯಿಂದ ಮತ್ತೊಬ್ಬರಿಗೆ ಕೈಲಾದ ಸಹಾಯ ಮಾಡಬೇಕೆನ್ನುವ ಉದ್ದೇಶದಿಂದಲೇ ಅಂಧರಿಗೆ ಈಜು ಕಲಿಸುವ ಪ್ರಯತ್ನ ಮಾಡುತ್ತಿದ್ದೇನೆ’ ಎಂದು  ಹೇಳುತ್ತಲೇ ಮಾತಿಗಿಳಿದರು ವಸಂತ ಕುಮಾರ್.

ಮೂಲತಃ ಸಕಲೇಶಪುರದವರಾದ ವಸಂತಕುಮಾರ್ ಪದವೀಧರರು. ಉದ್ಯೋಗಕ್ಕಾಗಿ ಹತ್ತು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಇದೀಗ ಪದ್ಮನಾಭನಗರದಲ್ಲಿ ನೆಲೆಸಿದ್ದಾರೆ. ವಸಂತ್ ಕಳೆದ 6 ತಿಂಗಳ ಹಿಂದೆ ಸ್ವಂತದೊಂದು ಫಾರ್ಮಾಸ್ಯೂಟಿಕಲ್ ಏಜೆನ್ಸಿ ಪ್ರಾರಂಭಿಸಿದ್ದಾರೆ.

ಅಂಧರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರುವ ಸಣ್ಣದೊಂದು ಆಶಯದಿಂದ ಕಳೆದ ಮೂರು ತಿಂಗಳಿನಿಂದ ಐದು ಜನ ಅಂಧರಿಗೆ ಹಲವು ಸ್ನೇಹಿತರ ಜತೆಗೂಡಿ ಈಜು ತರಬೇತಿ ನೀಡುತ್ತಿದ್ದಾರೆ. ಆ ಮೂಲಕ ಅಂಧಕಾರ ತುಂಬಿದವರ ಬಾಳಿನಲ್ಲಿ ಆತ್ಮವಿಶ್ವಾಸದ ಬೆಳಕು ಬೀರುವ ಅದಮ್ಯ ಆಸೆ ಹೊಂದಿದ್ದಾರೆ. ಕಣ್ಣು ಕಾಣುವವರೇ ನೀರಿಗೆ     ಇಳಿಯಲು ಹೆದರುವಾಗ ಇನ್ನೂ ಅಂಧರ ಪಾಡಂತೂ ಹೇಳತೀರದು. ಅವರನ್ನು ಅತಿಯಾಗಿ ಕಾಡುವ ಜಲಭಯವನ್ನು ಹೊಗಲಾಡಿಸಿ ಅವರಲ್ಲಿ ಧೈರ್ಯ ತುಂಬುವ ಮಹತ್ವದ ಕಾರ್ಯಕ್ಕೆ ಕೈ ಹಾಕಿದ್ದಾರೆ.

 ಬೆಂಗಳೂರಿನ ಬಸವನಗುಡಿಯಲ್ಲಿರುವ ಈಜುಕೊಳದಲ್ಲಿ ಪ್ರತಿದಿನ ಒಂದು ತಾಸು ಐದು ಜನರಿಗೆ ಈಜು ತರಬೇತಿ ನೀಡುತ್ತಾರೆ. ಅದರ ಶುಲ್ಕವನ್ನು ತಾವೇ ಭರಿಸುತ್ತಾರೆ. ಇವರಿಂದ ಈಜು ಕಲಿಯುತ್ತಿರುವ ಮಕ್ಕಳು ಈಗಾಗಲೇ 50 ಮೀಟರ್ ಉದ್ದ ಈಜುವ ಸಾಮರ್ಥ್ಯ ಗಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಆಳವಾದ ನೀರಿನಲ್ಲಿ ಈಜುವ ಪರಿಣತಿ ತಿಳಿಸಿ ಕೊಡುವ ಆಲೋಚನೆ ನಡೆಸಿದ್ದಾರೆ.

‘ನೀರೆಂದರೆ ಮೊದಲು ಹೆಚ್ಚು ಭಯವಾಗುತ್ತಿತ್ತು. ಈಗ ಅಭ್ಯಾಸವಾಗಿದೆ. ನಿತ್ಯ ದೊರೆಯುವ ತರಬೇತಿಯಿಂದ ಮಾನಸಿಕ ಸ್ಥೈರ್ಯ ಹೆಚ್ಚಾಗಿದೆ. ಇದೇ ರೀತಿ ನನ್ನಂತೆ ಅಂಧರೆಲ್ಲರಿಗೂ ಈಜು ಕಲಿಸುವ ವ್ಯವಸ್ಥೆ ಮಾಡಿದರೆ ನಮ್ಮಲ್ಲಿನ ಮಾನಸಿಕ ಕೀಳಿರಿಮೆ ದೂರವಾಗುತ್ತದೆ. ಅಂಧಕಾರದಲ್ಲಿ ಬೆಳಕಿನ ಕಿರಣ ಮೂಡಲು ಸಹಕಾರಿಯಾಗುತ್ತದೆ’ ಎನ್ನುತ್ತಾರೆ ಚಂದ್ರಶೇಖರ್.

’ಅಂಧರಿಗೆ ಈಜು ಮಾತ್ರ ಕಲಿಸುವುದರಿಂದ ಮಾತ್ರ ಅವರಿಗೆ ಸಂಪೂರ್ಣ ಸಹಾಯ ಮಾಡಿದಂತಾಗುವುದಿಲ್ಲ ಇದರೊಂದಿಗೆ ಟ್ರಸ್ಟ್ ಆರಂಭಿಸಿ ಅವರಿಗೆ ಉದ್ಯೋಗ ಒದಗಿಸುವ ಮೂಲಕ ‘ಅಂಧರೆಂದರೆ ಅನುಕಂಪ ಬಯಸುವ ಅವಲಂಬಿಗಳು ಎನ್ನುವುದನ್ನು ತೊಡೆದುಹಾಕಿ ಸ್ವಾವಲಂಬಿಗಳನ್ನಾಗಿ’ ಮಾಡುವ ಕನಸು ಹೊಂದಿದ್ದಾಗ ವಸಂತ್  ಹೇಳುತ್ತಾರೆ.

ತನ್ನಿಂದ ಐದು ಜನರಿಗೆ ಈಜು ಕಲಿಸಲು ಸಾಧ್ಯವಾಗುತ್ತಿರುವಾಗ ಅದೇ ತನ್ನಂತೆ ಇನ್ನೂ ಹಲವರು ಜೊತೆಗೂಡಿದರೆ ಬಹಳಷ್ಟು ಜನ ಅಂಧರಿಗೆ ಈಜು ಕಲಿಸಿ ಜತೆಗೆ ಅವರಿಗೆ ಸ್ವಉದ್ಯೋಗ ಅಗತ್ಯವಿರುವ ಕೌಶಲ ಕಲಿಸುವ ಹಾಗೂ ಉದ್ಯೋಗ ಪಡೆಯಲು ಪೂರಕವಾದ ಸಹಾಯ ಒದಗಿಸುವ ಸಂಸ್ಥೆ ಸ್ಥಾಪಿಸುವ ರಚಿಸುವ   ಯೋಜನೆಯನ್ನು ಅವರು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ‘ಅಂಧರಿಗಾಗಿ ಕನಸುಗಳ ಸಾಕಾರ’ ಎನ್ನುವ ಧ್ಯೇಯವುಳ್ಳ’ ‘ಸಾಕಾರ’ ಹೆಸರಿನ ಟ್ರಸ್ಟ್ ಸ್ಥಾಪಿಸಲು ಯತ್ನಿಸುತ್ತಿದ್ದಾರೆ. ಆದ್ದರಿಂದ ಅವರಿಗೆ ಇದೀಗ ಸಮಾನ ಮನಸ್ಕರರ ಹಾಗೂ ಸಂಘ ಸಂಸ್ಥೆಗಳ ನೆರವು ಅವಶ್ಯಕತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT