ಬೆಂಗಳೂರು: ಗುಜರಾತ್ನ ಅಶ್ವಿನ್ ಮಕ್ವಾನಾ ಬುಧವಾರ ಇಲ್ಲಿ ಕೊನೆಗೊಂಡ ಸಮರ್ಥನಂ ಪ್ರತಿಷ್ಠಾನ ಆಶ್ರಯದ ರಾಷ್ಟ್ರೀಯ ಫಿಡೆ ರೇಟೆಡ್ ಅಂಧರ ಓಪನ್ ಚೆಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಕರ್ನಾಟಕದ ಆಟಗಾರ ಕಿಷನ್ ಗಂಗೊಳ್ಳಿ ಎರಡನೇ ಸ್ಥಾನ ಪಡೆದರು.
ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಒಂಬತ್ತನೇ ಹಾಗೂ ಕೊನೆಯ ಸುತ್ತಿನ ಪಂದ್ಯದಲ್ಲಿ ಅಶ್ವಿನ್ ತಮ್ಮದೇ ರಾಜ್ಯದ ಸುಜಿತ್ ಜೆ.ಚೂಡಾಸಮ ಎದುರು ಗೆದ್ದು ಪೂರ್ಣ ಪಾಯಿಂಟ್ ಗಳಿಸಿದರು. ಈ ಪರಿಣಾಮ ಅವರು ಟೂರ್ನಿಯಲ್ಲಿ ಒಟ್ಟು ಎಂಟು ಪಾಯಿಂಟ್ ಸಂಗ್ರಹಿಸಿದರು.
ಮಕ್ವಾನಾ ಆರು ಸಾವಿರ ರೂ. ಬಹುಮಾನ ಮೊತ್ತವನ್ನು ಜೇಬಿಗಳಿಸಿದರು. ಕಿಷನ್ ಕೊನೆಯ ಸುತ್ತಿನಲ್ಲಿ ಗೆಲುವು ಸಾಧಿಸಿದರು. ಈ ಮೂಲಕ ಅವರು ಒಟ್ಟು ಏಳೂವರೆ ಪಾಯಿಂಟ್ ಕಲೆಹಾಕಿದರು. ಮಹಾರಾಷ್ಟ್ರದ ಸ್ವಪ್ನಿಲ್ ಶಾ ಏಳೂವರೆ ಪಾಯಿಂಟ್ ಗಳಿಸಿದರು. ಇವರಿಬ್ಬರು ತಲಾ 4500 ರೂ. ಬಹುಮಾನ ಪಡೆದರು.
ಕರ್ನಾಟಕದ ಮತ್ತೊಬ್ಬ ಆಟಗಾರ ಶ್ರೀಕೃಷ್ಣ ಉಡುಪ ಆರೂವರೆ ಪಾಯಿಂಟ್ಗಳೊಂದಿಗೆ ಮೂರನೇ ಸ್ಥಾನ ಪಡೆದರು. ಅವರು ಕೊನೆಯ ಸುತ್ತಿನ ಪಂದ್ಯದಲ್ಲಿ ಮಹಾರಾಷ್ಟ್ರದ ಬಾಗ್ಯತ್ಕರ್ ಮದನ್ ಎದುರು ಗೆದ್ದರು.