ಧಾರವಾಡ: ಬೃಹತ್ ಮೊತ್ತ ಮುಂದಿದ್ದರೂ ಧೃತಿಗೆಡದೆ ಬ್ಯಾಟಿಂಗ್ ಮಾಡಿದ ಮನೀಶ್ (40, 21 ಎಸೆತ, 1 ಸಿಕ್ಸರ್, 5ಬೌಂಡರಿ) ಹಾಗೂ ಬಿ.ಸುಭಾಷ್ (34, 23 ಎಸೆತ) ಇಂಡಿಯಾ ರೆಡ್ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇಲ್ಲಿನ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆ, ಸಮರ್ಥನಂ ಹಾಗೂ ಲಯನ್ಸ್ ಕ್ಲಬ್ ಆಶ್ರಯದ ಅಂಧರ ರಾಷ್ಟ್ರೀಯ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬಲಿಷ್ಠ ಇಂಡಿಯಾ ಯೆಲ್ಲೋ ತಂಡವನ್ನು ಇಂಡಿಯಾ ರೆಡ್ ತಂಡ ಎರಡು ವಿಕೆಟ್ಗಳಿಂದ ಮಣಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಇಂಡಿಯಾ ಯೆಲ್ಲೋ ತಂಡ, ಡಿ.ವೆಂಕಟೇಶ್ (66, 41ಎಸೆತ, 2 ಸಿಕ್ಸರ್, 8 ಬೌಂಡರಿ) ಅವರ ಅರ್ಧಶತಕದ ನೆರವಿನಿಂದ 18.5 ಓವರ್ಗಳಲ್ಲಿ 216 ರನ್ ಪೇರಿಸಿತು. ಇದಕ್ಕೆ ಉತ್ತರವಾಗಿ 20 ಓವರ್ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು 217 ರನ್ ಗಳಿಸಿದ ಇಂಡಿಯಾ ರೆಡ್ ಜಯದ ನಗೆ ಸೂಸಿತು.
ಎಸ್ಡಿಎಂ ದಂತ ವೈದ್ಯಕೀಯ ಕಾಲೇಜು ಮೈದಾನದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಹಿತೇಶ್ ಪಟೇಲ್ ಅವರ ಭರ್ಜರಿ ಬ್ಯಾಟಿಂಗ್ (92, 61 ಎಸೆತ, 9 ಬೌಂಡರಿ) ಹಾಗೂ ವಿಕಾಸ್ ಪಟೇಲ್-ನಾಯಕ ಶೇಖರ್ ನಾಯಕ್ ಜೋಡಿಯ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಇಂಡಿಯಾ ಬ್ಲೂ ತಂಡ 25 ರನ್ಗಳ ಸುಲಭ ಜಯ ಸಾಧಿಸಿತು.
ಅಜಯ್ ಕುಮಾರ್ ಗಳಿಸಿದ ಅರ್ಧಶತಕ (78, 52 ಎಸೆತ, 1 ಸಿಕ್ಸರ್, 9 ಬೌಂಡರಿ) ವ್ಯರ್ಥವಾಯಿತು. ಇದೇ ಮೈದಾನದಲ್ಲಿ ನಡೆಯಬೇಕಾಗಿದ್ದ ಇಂಡಿಯಾ ಯೆಲ್ಲೋ ಹಾಗೂ ಇಂಡಿಯಾ ಗ್ರೀನ್ ನಡುವಣ ಪಂದ್ಯವನ್ನು ಭಾರಿ ಮಳೆಯ ಕಾರಣ ರದ್ದು ಮಾಡಲಾಯಿತು.
ಸಂಕ್ಷಿಪ್ತ ಸ್ಕೋರ್: ಇಂಡಿಯಾ ಯೆಲ್ಲೋ ತಂಡ: 18.5 ಓವರ್ಗಳಲ್ಲಿ 216ಕ್ಕೆ ಆಲೌಟ್ (ಡಿ.ವೆಂಕಟೇಶ್ 66, ಕೆ.ರಮೇಶ್ 31; ಹನುಮಾನ್ 24ಕ್ಕೆ 3, ಲೋಕೇಶ್ 17ಕ್ಕೆ 3); ಇಂಡಿಯಾ ರೆಡ್ ತಂಡ: 20 ಓವರ್ಗಳಲ್ಲಿ 8ಕ್ಕೆ 217 (ಮನೀಶ್ 40, ಬಿ.ಸುಭಾಷ್ 34; ಕೆ.ರಮೇಶ್ 38ಕ್ಕೆ 3). ಫಲಿತಾಂಶ: ಇಂಡಿಯಾ ರೆಡ್ಗೆ 2 ವಿಕೆಟ್ ಜಯ.
ಇಂಡಿಯಾ ಬ್ಲೂ: 20 ಓವರ್ಗಳಲ್ಲಿ 6ಕ್ಕೆ 198 (ಹಿತೇಶ್ ಪಟೇಲ್ 92, ವಿಕಾಸ್ ಪಟೇಲ್ 50; ಅಜಯ್ ಕುಮಾರ್ 20ಕ್ಕೆ 1, ಶಿವಪ್ಪ 22ಕ್ಕೆ 1); ಇಂಡಿಯಾ ಗ್ರೀನ್: 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 173 (ಅಜಯ್ ಕುಮಾರ್ 78, ಮುಂಡೆ 45; ವಿಕಾಸ್ ಪಟೇಲ್ 25ಕ್ಕೆ 2, ಶೇಖರ್ ನಾಯಕ್ 23ಕ್ಕೆ 1). ಫಲಿತಾಂಶ-ಇಂಡಿಯಾ ಬ್ಲೂಗೆ 25 ರನ್ ಜಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.