ಭದ್ರಾವತಿ: ಸಿದ್ಧಾರ್ಥ ಅಂಧರ ಕೇಂದ್ರಕ್ಕೆ ಸರ್ಕಾರದಿಂದ ನಿವೇಶನ ದೊರಕಿಸಲು ಪ್ರಯತ್ನ ಮಾಡುವುದಾಗಿ ಶಾಸಕ ಎಂ .ಜೆ. ಅಪ್ಪಾಜಿ ಹೇಳಿದರು.
ಭಾನುವಾರ ಕೇಂದ್ರದ ಆವರಣದಲ್ಲಿ ಜರುಗಿದ ಅಂಧರ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಂಪ್ಯೂಟರ್ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಸರ್ಕಾರದ ಅನುದಾನದ ನೆರವಿಲ್ಲದೆ ಕಳೆದ ಹಲವು ದಶಕದಿಂದ ನಡೆದು ಬರುತ್ತಿರುವ ಈ ಕೇಂದ್ರ ಅಂಧರ ಪಾಲಿಗೆ ಬೆಳಕಾಗಿ ಕೆಲಸ ಮಾಡುತ್ತಿರುವುದು ಶ್ಲಾಘನಿಯ. ಇದರ ಅಭಿವೃದ್ಧಿಗೆ ಶ್ರಮಿಸುವ ಭರವಸೆ ನೀಡಿದರು.
ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಎಂ. ಗುರುಮೂರ್ತಿ ಮಾತನಾಡಿದರು. ವಿಐಎಸ್ಎಲ್ ಅಧಿಕಾರಿ ಎಸ್. ಗೋಸ್ವಾಮಿ ಹೆಣಿಗೆ ಕುರ್ಚಿಗಳನ್ನು ಮಾರಾಟಕ್ಕೆ ಬಿಡುಗಡೆ ಮಾಡಿದರು.
ಕೇಂದ್ರದ ನಿರ್ದೇಶಕ ಕೆ.ವಿ. ನಾರಾಯಣ, ಡಾ. ಸುಶಿತ್ ಶೆಟ್ಟಿ, ಸಿರಿಲ್ ಡಿಕಾಸ್ಟಾ, ಆರ್. ಬಾಲಾಜಿ, ಎನ್.ಆರ್. ಶಿವರಾಂ ಉಪಸ್ಥಿತರಿದ್ದರು. ಕೇಂದ್ರದ ಮುಖ್ಯಸ್ಥರಾದ ಶಾರದ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಅಂಧ ವಿದ್ಯಾರ್ಥಿಗಳಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಹಲವು ಸ್ಪರ್ಧೆಗಳಲ್ಲಿ ವಿಜೇತರಾದ ಕೇಂದ್ರದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.