ಬೆಂಗಳೂರು: ನಟ ಅಂಬರೀಷ್ ಅವರ ಮಗ ಅಭಿಷೇಕ್ಗೌಡ ಅವರ ವಿರುದ್ಧ ಅವಹೇಳನಕಾರಿ ಲೇಖನ ಪ್ರಕಟಿಸಲಾಗಿದೆ ಎಂದು ಆರೋಪಿಸಿ ಕೆಲ ಅಭಿಮಾನಿಗಳು ಇಂದ್ರಜಿತ್ ಲಂಕೇಶ್ ಅವರ ಸಂಪಾದಕತ್ವದ ಲಂಕೇಶ್ ಪತ್ರಿಕೆಯ ಕಚೇರಿಗೆ ನುಗ್ಗಿ ದಾಂದಲೆ ನಡೆಸಿರುವ ಘಟನೆ ರಾಜರಾಜೇಶ್ವರಿ ನಗರದಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ರಾಜರಾಜೇಶ್ವರಿ ದೇವಸ್ಥಾನದ ಬಳಿ ಇರುವ ಪತ್ರಿಕೆಯ ಕಚೇರಿಗೆ ಬೆಳಿಗ್ಗೆ 11 ಗಂಟೆ ಸುಮಾರಿಗೆ ಏಕಾಏಕಿ ನುಗ್ಗಿದ 15ಕ್ಕೂ ಹೆಚ್ಚು ಅಭಿಮಾನಿಗಳು ಕಚೇರಿಯ ಕಂಪ್ಯೂಟರ್ ಮತ್ತು ಕಿಟಿಕಿ ಬಾಗಿಲುಗಳ ಗಾಜನ್ನು ಒಡೆದು ಹಾಕಿದ್ದಾರೆ. ಅಲ್ಲದೇ ಕಚೇರಿಯ ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿ ಪೀಠೋಪಕರಣಗಳನ್ನು ಜಖಂಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ಕಚೇರಿಯ ಸಿಬ್ಬಂದಿ ದೂರು ಕೊಟ್ಟಿದ್ದಾರೆ. ಅಕ್ರಮ ಪ್ರವೇಶ, ಹಲ್ಲೆ ಹಾಗೂ ದಾಂದಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜರಾಜೇಶ್ವರಿನಗರ ಪೊಲೀಸರು ಹೇಳಿದ್ದಾರೆ.