ಧಾರವಾಡ: `ವರಕವಿ ಡಾ. ದ.ರಾ.ಬೇಂದ್ರೆ ಅವರ ಹೆಸರಿನಲ್ಲಿ ನೀಡುವ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಗೆ ಮೈಸೂರಿನ ಡಾ. ಕೆ.ಎಸ್.ನಾರಾಯಣಾಚಾರ್ಯ ಹಾಗೂ ಗದುಗಿನ ಡಾ. ಬಿ.ಬಿ.ರಾಜಪುರೋಹಿತ ಅವರನ್ನು ಆಯ್ಕೆ ಮಾಡಲಾಗಿದೆ~ ಎಂದು ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ಅಧ್ಯಕ್ಷ ಡಾ. ಶ್ಯಾಮಸುಂದರ ಬಿದರಕುಂದಿ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಇದೇ 31 ರಂದು ನಡೆಯುವ ಬೇಂದ್ರೆಯವರ ಜನ್ಮ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ತಲಾ 50,000 ರೂಪಾಯಿ ನಗದು, ಸ್ಮರಣಿಕೆ ಮತ್ತು ಪ್ರಶಂಸಾಪತ್ರ ಒಳಗೊಂಡಿದೆ ಎಂದರು.
ಪ್ರತಿ ವರ್ಷ ಒಬ್ಬ ಲೇಖಕರಿಗೆ ಒಂದು ಲಕ್ಷ ರೂಪಾಯಿ ನಗದು ಜೊತೆಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿತ್ತು. ಈ ಬಾರಿ ಇಬ್ಬರು ಲೇಖಕರನ್ನು ಆಯ್ಕೆ ಮಾಡಲಾಗಿದೆ.