ಮುಳಬಾಗಿಲು: ಬೇತಮಂಗಲ ಬಸ್ ನಿಲ್ದಾಣದ ಪೊಲೀಸ್ ಠಾಣೆ ಮುಂಭಾಗ ದಲ್ಲಿದ್ದ ಡಾ.ಬಿ.ಆರ್ಅಂಬೇಡ್ಕರ್ ಪ್ರತಿಮೆ ಕೆಡವಿರುವುದನ್ನು ವಿರೋಧಿಸಿ ದಲಿತ ಸಂಘರ್ಷ ಸಮಿತಿ (ಸಂಯೋಜಕ) ವತಿಯಿಂದ ತಾಲ್ಲೂಕು ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಇಲ್ಲಿ 20 ವರ್ಷದ ಹಿಂದೆ ಡಾ. ಬಿ.ಅರ್.ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪಿಸಲಾಗಿದ್ದು, ಕೆಜಿಎಫ್ ಕ್ಷೇತ್ರದ ಶಾಸಕ ವೈ.ಸಂಪಂಗಿ ಬಂಡವಾಳ ಶಾಹಿಗಳ ಕೈಗೊಂಬೆಯಾಗಿ ಅಂಬೇಡ್ಕರ್ ಪ್ರತಿಮೆಯನ್ನು ಕೆಡವಲು ಅನುಮತಿ ನೀಡಿದ್ದಾರೆಂದು ಆರೋಪಿಸಿದರು.
ಶಾಸಕ ಸಂಪಂಗಿ ಮೇಲೆ ಕ್ರಮ ಜರುಗಿಸಬೇಕು. ಕಾಮಗಾರಿ ನಡೆಸುತ್ತಿರುವ ಲೋಕೋಪಯೋಗಿ ಮುಖ್ಯಾಧಿಕಾರಿಯನ್ನು ಅಮಾನತು ಗೊಳಸಬೇಕು. ಡಾ. ಅಂಬೇಡ್ಕರ್ ಪ್ರತಿಮೆಯನ್ನು ಮರು ಸ್ಥಾಪಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ದಂಡಾಧಿಕಾರಿ ಪಿ.ಜಯ ಮಾದವ್ಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ದಸಂಸ (ಸಂಯೋಜಕ) ತಾಲ್ಲೂಕು ಸಂಯೋಜಕ ವಿ.ಮಂಜುನಾಥ್, ಕಲಾ ಮಂಡಳಿ ಸಂಯೋಜಕ ಆವನಿ ಗೋಪಿ, ಖಜಾಂಚಿ ಡೇವಿಡ್, ಬಲ್ಲಸೋಮು, ಗುಜ್ಜನಹಳ್ಳಿ ಕಲಾವಿದ ಜಗದೀಶ್, ಎಸ್ಎಫ್ಐ ಅಮರೀಶ್, ಮಹಿಳಾ ಮಂಡಳಿ ಸುಗಣಮ್ಮ ಭಾಗವಹಿಸಿದ್ದರು.
ರಸಗೊಬ್ಬರ ವಿತರಣೆ
ಮಾಲೂರು: ತ್ಲ್ಲಾಲೂಕಿನಲ್ಲಿ ರಸ ಗೊಬ್ಬರದ ಕೊರತೆಯಿಂದ ಪರದಾಡು ತ್ತಿದ್ದ ರೈತರಿಗೆ ಬುಧವಾರ ದ್ಯಾಪಸಂದ್ರ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವ ಸಹಕಾರ ಸಂಘದಿಂದ ಗೊಬ್ಬರ ವಿತರಣೆ ಮಾಡಲಾಯಿತು.
ತಾಲ್ಲೂಕಿನಲ್ಲಿ ವಾರದಿಂದ ಸುರಿಯುತ್ತಿರುವ ಮಳೆಯಿಂದ ಕೃಷಿ ಚಟುವಟಿಕೆ ಚುರುಕುಗೊಂಡಿದ್ದು, ರಸಗೊಬ್ಬರ ಸಮರ್ಪಕವಾಗಿ ದೊರೆತಿರಲಿಲ್ಲ. ಸಂಘದಿಂದ 10 ಟನ್ ಇಪ್ಕೋ ಯೂರಿಯಾ ತಂದು ರೈತರಿಗೆ ನೀಡಲಾಯಿತು.
ಸರ್ಕಾರದ ದರದಂತೆ ಪ್ರತಿ ಮೂಟೆಗೆ ರೂ. 282 ಪಡೆದು ಗೊಬ್ಬರ ನೀಡಲಾಗುತ್ತಿದೆ ಎಂದು ರೈತ ಸೇವ ಸಹಕಾರ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ ತಿಳಿಸಿದರು.
ಪಟ್ಟಣದ ಕೆಲವು ಅಂಗಡಿಗಳಲ್ಲಿ ಯೂರಿಯಾ ಮೂಟೆಗೆ ರೂ. 400ರಂತೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಸಂಬಂದಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಮಾದನಹಟ್ಟಿ ಗ್ರಾಮದ ರೈತ ರಾಜಪ್ಪ ಒತ್ತಾಯಿಸಿದ್ದಾರೆ.