ಸಾಗರ: ಇಲ್ಲಿನ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ. ಕೃಷ್ಣಪ್ಪ ಬಣ) ಕಾರ್ಯಕರ್ತರು ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ನಗರದಲ್ಲಿ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಹಾಗೂ ನಗರಸಭೆ ಅವ್ಯವಹಾರ ಖಂಡಿಸಿ ಗುರುವಾರ ಧರಣಿ ಸತ್ಯಾಗ್ರಹ ನಡೆಸಿದರು.
ನಗರವ್ಯಾಪ್ತಿಯಲ್ಲಿ ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸುವಂತೆ ಹಲವು ವರ್ಷಗಳಿಂದ ಡಿಎಸ್ಎಸ್ ಒತ್ತಾಯಿಸುತ್ತಾ ಬಂದಿದೆ. ಈ ಉದ್ದೇಶಕ್ಕಾಗಿ ನಗರಸಭೆಯ ಎಸ್ಎಫ್ಸಿ ಮುಕ್ತನಿಧಿ ಯೋಜನೆಯಡಿ ್ಙ 2 ಲಕ್ಷ ಕಾಯ್ದಿರಿಸಲಾಗಿದೆ. ಆದಾಗ್ಯೂ ಪ್ರತಿಮೆ ಸ್ಥಾಪನೆಗೆ ಅನಗತ್ಯ ವಿಳಂಬ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಕಾರ್ಯ ಶೀಘ್ರವಾಗಿ ಆರಂಭಿಸುವಂತೆ ನಗರಸಭೆ ಅಧ್ಯಕ್ಷ ಎಸ್.ವಿ. ಕೃಷ್ಣಮೂರ್ತಿ ಅವರಿಗೆ ಸಂಘಟನೆ ಕಾರ್ಯಕರ್ತರು ಈಚೆಗೆ ಒತ್ತಾಯ ಹೇರಲು ಹೋದಾಗ ಅವರಿಗೆ ಅಧ್ಯಕ್ಷರು ಅವಾಚ್ಯ ಶಬ್ಧ ಬಳಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಧರಣಿ ನಿರತರು ಆರೋಪಿಸಿದರು.
ನಗರಸಭೆಯ ಶೇ. 22.75ರ ನಿಧಿಯಡಿ ದಲಿತರಿಗೆ ನೀಡುತ್ತಿರುವ ನೆರವು ಅರ್ಹರಿಗೆ ತಲುಪುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ದಸಂಸ ರಾಜ್ಯ ಸಂಚಾಲಕ ಸತ್ಯ ಭದ್ರಾವತಿ, ಜಿಲ್ಲಾ ಸಂಚಾಲಕ ಚಿನ್ನಯ್ಯ, ಜಿಲ್ಲಾ ಸಂಘಟನಾ ಸಂಚಾಲಕ ರಾಜ್ಕುಮಾರ, ಪ್ರಕಾಶ್ ಲಿಗಾಡಿ, ಮಣಿ, ಗುರುರಾಜ್, ಎಸ್. ಲಕ್ಷ್ಮಣ್ ಸಾಗರ್, ಮಂಜುನಾಥ ಚಿಪ್ಳಿ, ನಾರಾಯಣ ಗೋಳಗೋಡು, ಸೋಮಶೇಖರ ಅರಮನೆಕೇರಿ, ದೇವೇಂದ್ರ ಅಣಲೆಕೊಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.