ಕನಕಪುರ: ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನವನ್ನು ಬರೆದಿಲ್ಲ. ಕೇವಲ ಓದಿದರೆಂಬ ಪುಸ್ತಕವನ್ನು ಬರೆಯುವ ಮೂಲಕ ಜನತೆಯ ದಿಕ್ಕುತಪ್ಪಿಸಲು ಹೊರಟಿರುವ ಪ್ರಾಂಶುಪಾಲ ಪಿ.ಎ.ಕುಮಾರ್ ಅವರನ್ನು ಕೂಡಲೇ ಬಂಧಿಸಿ ದೇಶದಿಂದ ಗಡಿಪಾರು ಮಾಡಬೇಕು ಮತ್ತು ಅವರು ಬರೆದಿರುವ ಪುಸ್ತಕವನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ದಲಿತ ಹಿಂದುಳಿದವರ ವೇದಿಕೆ ಕಾರ್ಯಕರ್ತರು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ರಾಂಪುರ ನಾಗೇಶ್ ಮಾತನಾಡಿ, ಪಿ.ಎ.ಕುಮಾರ್ ಜನಸಾಮಾನ್ಯರನ್ನು ದಾರಿ ತಪ್ಪಿಸುವ ಕೆಲಸಕ್ಕೆ ಕೈಹಾಕಿದ್ದಾರೆ. ಸಮಾಜದ ಶಾಂತಿ ಕದಡಲು ಹೊರಟಿರುವ ಅವರನ್ನು ಹಾಗೂ ಇತರೆ ಮೂವರನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಸಮತಾ ಸೈನಿಕ ದಳದ ಜಿಲ್ಲಾದ್ಯಕ್ಷ ಜಿ.ಗೋವಿಂದಯ್ಯ ಮಾತನಾಡಿ, ಸಮಾಜದ ಶಾಂತಿ ಕದಡಿ ಜನಾಂಗೀಯ ಘರ್ಷಣೆಗೆ ನಾಂದಿ ಹಾಡುತ್ತಿರುವ ದೇಶದ್ರೋಹಿಗಳನ್ನು ಬಂಧಿಸಿ ಉಗ್ರ ಶಿಕ್ಷೆ ವಿಧಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕೋಟೆಕುಮಾರ್, ಕೆ.ಎಚ್.ಜವರಯ್ಯ, ಸೇನಯ್ಯ, ಶಿವಕುಮಾರ್, ಕುಮಾರ್, ಸಿದ್ದಬೀರಯ್ಯ, ಹೊನ್ನಪ್ಪ, ಡಿ.ಸಿ.ಮರಿಯಪ್ಪ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.