ಕುಮಟಾ: ಸಿಡಿಲು ಹೊಡೆದು ಮೂರು ಹಸು ಹಾಗೂ ಒಂದು ಕರು ಮೃತಪಟ್ಟ ಘಟನೆ ತಾಲ್ಲೂಕಿನ ಕಾಗಾಲ-ಮಾನೀರ ಜನಾರ್ದನ ಗಾವಡಿ ಎಂಬವರ ಮನೆಯಲ್ಲಿ ಸಂಭವಿಸಿದೆ.
ಕಲ್ಲಿನ ಗೋಡೆ, ಹೆಂಚಿನ ಛಾವಣಿಯ ಕೊಟ್ಟಿಗೆಯಲ್ಲಿದ್ದ ದನಗಳು ಸಂಜೆ ಕೊಟ್ಟಿಗೆಗೆ ಬಂದಾಗ ಗುಡುಗು-ಸಿಡಿಲಿನ ಆರ್ಭಟ ಉಂಟಾಗಿತ್ತು. ಈ ಸಂದರ್ಭದಲ್ಲಿ ದುರಂತ ಸಂಭವಿಸಿದೆ. ಕೊಟ್ಟಿಗೆಯಲ್ಲಿದ್ದ ಎರಡು ಎಳೆ ಕರುಗಳು ಮಾತ್ರ ಉಳಿದುಕೊಂಡಿವೆ. ಸಿಡಿಲಿಗೆ ಅಡುಗೆ ಮನೆಯಲ್ಲಿ ಕಿಟಕಿ ಕೂಡಿಸಿದ ಭಾಗದ ಗೋಡೆ ಒಡೆದು ಹೋಗಿದೆ. ಮನೆಯ ಎಲ್ಲ ಕೋಣೆಗಳಲ್ಲೂ ಸ್ವಿಚ್ ಬೋರ್ಡ್ ಒಡೆದು ಚೂರಾಗಿದೆ. ಹಸು-ಕರುಗಳ ಸಾವಿನಿಂದ ಮನೆಗೆ ಸಂಭವಿಸಿದ ಹಾನಿಯಿಂದ ಸಾವಿರಾರು ರೂಪಾಯಿ ಹಾನಿ ಸಂಭವಿಸಿದೆ ಎಂದು ತಿಳಿಸಲಾಗಿದೆ.
ವನ್ನಳ್ಳಿಯ ಸಾಲ್ವದೋರ್ ಪಾವ್ಲ್ ಡಯಾಸ್ ಎನ್ನುವವರ ಮನೆ ಮೇಲೆ ಮರ ಬಿದ್ದು 30 ಸಾವಿರ ರೂಪಾಯಿ ಹಾನಿ ಸಂಭವಿಸಿದೆ. ಹೆಗಡೆಯ ಮಹಾಬಲೇಶ್ವರ ಕೃಷ್ಣ ಪಟಗಾರ ಎಂಬವರ ಕೊಟ್ಟಿಗೆಗೆ ಸಿಡಿಲು ಹೊಡೆದು ಒಂದು ಎತ್ತು ಮೃತಪಟ್ಟಿದ್ದು 5 ಸಾವಿರ ರೂಪಾಯಿ ಹಾನಿಯಾಗಿದೆ.
ದೀವಗಿ ನಾಗಿ ಹರೀಶ ಮುಕ್ರಿ ಎನ್ನವವರ ಮನೆಯ ಛಾವಣಿಯ ಹಂಚುಗಳು ಚೂರಾಗಿ 500 ರೂಪಾಯಿ ಹಾನಿಯಾಗಿದೆ ಎಂದು ತಹಸೀಲ್ದಾರ ವಿ.ಬಿ. ಫರ್ನಾಂಡಿಸ್ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ನಾಯ್ಕ, ಜಿ.ಪಂ. ಸದಸ್ಯೆ ಮಾದೇವಿ ಗೌಡ, ಪಂಚಾಯಿತಿ ಸದಸ್ಯ ಶ್ರೀಧರ ಗೌಡ ಭೇಟಿ ನೀಡಿದರು. ಕಂದಾಯ ನಿರೀಕ್ಷ ಬಸವರಾಜ ಪಂಚನಾಮೆ ನಡೆಸಿದರು. ಜಿ.ಐ. ಹೆಗಡೆ, ಈಶ್ವರ ಗಾವಡಿ ಮುಂತಾದವರು ಈ ಸಂದರ್ಭದಲ್ಲಿ ಇದ್ದರು.