ಧಾರವಾಡ: ‘12ನೇ ಶತಮಾನದಲ್ಲಿ ಜಗತ್ತಿಗೆ ಸಮಾನತೆ ಮತ್ತು ಸ್ತ್ರೀ ಸ್ವಾತಂತ್ರ್ಯದ ಕಲ್ಪನೆ ಕೊಟ್ಟವರು ಬಸವಣ್ಣನವರು. ಇಂದಿಗೂ ಬಸವಣ್ಣನವರ ತತ್ವಗಳು, ಆದರ್ಶ ಪ್ರಸ್ತುತ. ಹೀಗಾಗಿ 21ನೇ ಶತಮಾನ ಬಸವಯುಗ’ ಎಂದು ಯಕ್ಸಂಬಾ ಶಾಸಕಿ ಶಶಿಕಲಾ ಜೊಲ್ಲೆ ಅಭಿಪ್ರಾಯಪಟ್ಟರು.
ಭಾನುವಾರ ಇಲ್ಲಿನ ಅಕ್ಕನ ಬಳಗದಲ್ಲಿ ಹಮ್ಮಿಕೊಂಡಿದ್ದ ಅಕ್ಕ ಮಹಾದೇವಿ ಜಯಂತಿ ಆಚರಣೆ ಮತ್ತು ಅಕ್ಕನ ಬಳಗದ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ‘ಅಂದು ಬಸವಣ್ಣನವರು ಸ್ತ್ರೀ ಸ್ವಾತಂತ್ರ್ಯದ ಕಲ್ಪನೆ ಕೊಡದೇ ಹೋಗಿದ್ದಲ್ಲಿ, ಅಕ್ಕಮಹಾದೇವಿ ಸೇರಿದಂತೆ ಹಲವಾರು ಶರಣೆಯರು ಬೆಳಕಿಗೆ ಬರುವ ಸಾಧ್ಯತೆ ಇರಲಿಲ್ಲ. ಹೀಗಾಗಿ ಪ್ರತಿ ಮಹಿಳೆಯ ಯಶಸ್ಸಿನ ಹಿಂದೆ ಉತ್ತಮ ಪುರುಷರ ಕೊಡುಗೆ ಇದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಅಕ್ಕಮಹಾದೇವಿ ಭೌತಿಕ ಸುಖಗಳನ್ನು ತ್ಯಾಗ ಮಾಡಿ, ಧೈರ್ಯ, ದಿಟ್ಟತನದಿಂದ ತನ್ನನ್ನು ಅಭಿವ್ಯಕ್ತಿಸಿಕೊಂಡವಳು. ಆಕೆಯ ಆದರ್ಶಮಹಿಳಾ ಸಮುದಾಯಕ್ಕೆ ಪ್ರೇರಣೆಯಾಗಬೇಕು’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಗದಗ ತೋಂಟದಾರ್ಯ ಸಂಸ್ಥಾನಮಠದ ಡಾ.ಸಿದ್ಧಲಿಂಗ ಸ್ವಾಮೀಜಿ, ‘ಪ್ರಸ್ತುತ ಲಿಂಗಾಯತ ಸಮುದಾಯ ಜಡಗೊಂಡಿದೆ. ನಾವು ಕೇವಲ ಭೂತಕಾಲದಲ್ಲಿ ಬದುಕುತ್ತಿದ್ದೇವೆ. ವರ್ತಮಾನ, ಭವಿಷ್ಯ ಕುರಿತು ಯೋಚಿಸುತ್ತಿಲ್ಲ. ಬಸವಾದಿ ಶರಣರ ಅನುಯಾಯಿಗಳೆಂದು ಹೇಳಿಕೊಳ್ಳುತ್ತೇವೆ. ಆದರೆ ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಕುರಿತು ಚಿಂತನೆ ನಡೆಯುತ್ತಿಲ್ಲ. ಒಂದರ್ಥದಲ್ಲಿ ನಾವು ಬಾವಿಯೊಳಗಿನ ಕಪ್ಪೆಗಳಂತೆ ಬದುಕುತ್ತಿದ್ದೇವೆ’ ಎಂದು ಹೇಳಿದರು.
‘ಭಾರತೀಯ ಪರಂಪರೆ ಮತ್ತು ಹಿಂದೂ ಧರ್ಮದಲ್ಲಿ ಮಹಿಳೆಯರನ್ನು ಶೂದ್ರರನ್ನಾಗಿ ಪರಿಗಣಿಸಲಾಗುತ್ತಿತ್ತು. ಮನುಷ್ಯ, ಮನುಷ್ಯರ ನಡುವೆ ಭೇದ–ಭಾವ ಮಾಡುವ ನಿಯಮಗಳನ್ನು ರೂಢಿಸಿಕೊಳ್ಳಲಾಗಿತ್ತು. ಮನುಸ್ಮೃತಿಯೇ ಅವರ ಸಂವಿಧಾನವಾಗಿತ್ತು. ಮಹಿಳೆಯರನ್ನು ಶೋಷಣೆಯಿಂದ ಮುಕ್ತಗೊಳಿಸಲು ಮಹಿಳೆಯರು ಮುಂದಾದ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ’ ಎಂದರು.
ಶಾಸಕರಾದ ವಿನಯ ಕುಲಕರ್ಣಿ ‘ಅಮೃತ ವಿರಾಗಿಣಿ’ ಸ್ಮರಣ ಸಂಚಿಕೆ, ಅರವಿಂದ ಬೆಲ್ಲದ ‘ಕದಳಿಯ ಕಲ್ಪತರು‘ ಸ್ಮರಣ ಸಂಪುಟ ಬಿಡುಗಡೆಗೊಳಿಸಿದರು. ಪ್ರಭಾವತಿ ಮೂರಶಿಳ್ಳಿ, ಶಾರದಾ ಬೆಲ್ಲದ, ನಳಿನಾಕ್ಷಿ ಅರಳಗುಪ್ಪಿ ಸೇರಿದಂತೆ ಹಲವರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.