ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕನಿಗೆ....

ದೀಪಾವಳಿ ವಿಶೇಷಾಂಕ ತೀರ್ಪುಗಾರರ ಮೆಚ್ಚುಗೆ ಪಡೆದ ಕವಿತೆ
Last Updated 14 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಟ್ಟದ ಮೇಲೊಂದು ಮನೆಯ ಮಾಡಿದರೆ
ಮೃಗಗಳಿಗಂಜುವುದನಿವಾರ್ಯ, ನಿಜ
ಜೊತೆ ಜೊತೆಗೇ ಹೊಸಿಲವರೆಗೂ ಬಂದು ಕೈಗೆಟಕುವ ಮೇಘ
ನೆತ್ತಿಗೆ ತಾಗಿದಂತೆ ಮಿನುಗುವ ನಕ್ಷತ್ರ ರಾಶಿ
ಜಯ–ವಿಜಯರಂತೆ ಸರದಿ ಬದಲಾಯಿಸುವ
ಸೂರ್ಯ–ಚಂದ್ರರ ಪಹರೆಯ ಪರಿಯನ್ನನುಭವಿಸುತ್ತಲೇ
ಲೌಕಿಕದ ಇರವ ಮರೆಯಬಹುದು.

ಸಮುದ್ರದ ತಡಿಯ ಜೋಪಡಿಯಲ್ಲಂತೂ
ನೊರೆ, ತೆರೆಗಳ ಜೊತೆಜೊತೆಗೇ
ದಡದುದ್ದಕ್ಕೂ ಚಾಚುವ ಚಾಮರದ ಸೇವೆ–
ಯ ಸುಖದ ಸನಿಹ ಮರಳ ಕಣಕಣದಲ್ಲಿ
ಫಳಫಳನೆ ಹೊಳೆವ ಶಿವನ ಕರುಣೆಯ ಕಿರಣ
ಹುಣ್ಣಿಮೆಗೆ ಉಕ್ಕೇರುವ ಕಡಲ ಒಳಸುಳಿ
ಮೀನು ಬೇಟೆಗೆ ನಿಂತ ದೋಣಿ ಸಾಲು.

ಸಂತೆಯೊಳಗಿನ ಮನೆಯ ಬಯಲಲ್ಲಿ
ಸದ್ದು, ಗದ್ದಲ, ಜನ, ಘಮ, ಧೂಮದ ಮೆರಗು
ಬಣ್ಣಬಣ್ಣದ ಹಣ್ಣು, ವಿಧ ವಿಧದ ತರಕಾರಿ,
ಕಾಳುಕಡಿ, ಜವಳಿ, ಅಗ್ಗದ ಚಪ್ಪಲಿ
ಕೊಂಬಿನಲಂಕಾರ, ಈಳಿಗೆಯ ಮಣೆ, ಹಗ್ಗದಂಗಡಿ ಕಡೆಗೆ
ಸೇಂದಿಯಂಗಡಿಯ ಪಕ್ಕ ಜೂಜುಕಟ್ಟೆಗೆ ಒರಗಿ
ಶಬ್ದಕ್ಕಂಜದೇ ನಿಂತು ಕಾಂಬುವ ಸಂತ.

ಅಕ್ಕ, ಹಾಗಾಗಿಯೇ

ಚನ್ನಮಲ್ಲಿಕಾರ್ಜುನನೇ ಇಳೆಗಿಳಿದು ಬಂದರೂ
ಲೋಕ ವ್ಯಾಪಾರದ ಜೊತೆಗೇ ಅವನೂ ಏಗಬೇಕು
ಸ್ತುತಿ, ನಿಂದೆ, ಇಚ್ಛೆ, ಈರ್ಷ್ಯೆಗಳ ನಡುವಲ್ಲೇ ಸಗ್ಗವ ಧ್ಯಾನಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT