ಧಾರವಾಡ: ಅಕ್ಕಿಹೊಂಡ ಮಾರುಕಟ್ಟೆ ಸ್ಥಳಾಂತರಕ್ಕೆ ಗಡುವು ನೀಡಿರುವ ಹಿನ್ನೆಲೆ ಯಲ್ಲಿ ವರ್ತಕರ ನಿಯೋಗವೊಂದು ಬುಧ ವಾರ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರನ್ನು ಭೇಟಿ ಮಾಡಿ ಸಮಯ ವಿಸ್ತರಿಸುವಂತೆ ಮನವಿ ಮಾಡಿತು.
ಸ್ಥಳಾಂತರಕ್ಕೆ ಸಂಬಂಧಿಸಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ವರ್ತಕರು ಮುಚ್ಚ ಳಿಕೆ ನೀಡಿ, ಅರ್ಜಿ ಹಿಂಪಡೆದಿರುವುದರಿಂದ ಈ ಕುರಿತು ಏನಾದರೂ ನಿರ್ಣಯ ಕೈಗೊಳ್ಳುವುದು ನ್ಯಾಯಾಂಗ ನಿಂದನೆಯಾ ಗುತ್ತದೆ. ಹೊಸ ಎಪಿಎಂಸಿ ಯಾರ್ಡ್ನಲ್ಲಿ ಸೌಲಭ್ಯಗಳ ಕೊರತೆ ಇದ್ದರೆ ಅವುಗಳನ್ನು ಒದಗಿಸಲು ಕ್ರಮ ಕೈಗೊಳ್ಳಬಹುದು. ಹೀಗಾಗಿ ಈ ವಿಷಯದಲ್ಲಿ ಏನೂ ಮಾಡು ವಂತಿಲ್ಲ. ಎಲ್ಲರೂ ನ್ಯಾಯಾಲಯದ ನಿರ್ಣಯಕ್ಕೆ ಬದ್ಧರಾಗಿರಬೇಕಾಗುತ್ತದೆ. ಈ ವಿಷಯದಲ್ಲಿ ಸರ್ಕಾರ ಏನೂ ಮಾಡುವಂತಿಲ್ಲ ಎಂದು ಸಚಿವ ಲಾಡ್ ವರ್ತಕರಿಗೆ ತಿಳಿ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು, ಸರ್ಕಾರ ಸೂಚಿಸಿದ ಜಾಗೆಯಲ್ಲಿ ಸೌಲಭ್ಯ ಗಳನ್ನು ಒದಗಿಸಲಾಗಿದೆ. ಕೆಲವು ವರ್ತ ಕರು ಈಗಾಗಲೇ ಸ್ಥಳಾಂತರಗೊಂಡಿದ್ದಾರೆ. ನ್ಯಾಯಾಲಯ ಸಮಯ ನಿಗದಿಪಡಿಸಿ ರುವುದರಿಂದ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕುರಿತು ಎಪಿಎಂಸಿ ಅಧ್ಯಕ್ಷ, ಸದಸ್ಯರು ಮತ್ತು ವರ್ತಕರ ಸಭೆ ನಡೆಸಲಾಗಿದೆ ಎಂದು ಸಚಿವರ ಗಮನಕ್ಕೆ ತಂದರು.
ಮಾರುಕಟ್ಟೆ ಸ್ಥಳಾಂತರಕ್ಕೆ ಸಂಬಂಧಿಸಿ ಸರ್ಕಾರದ ಆದೇಶವನ್ನು ವರ್ತಕರು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಏಕಸದಸ್ಯ ಪೀಠ ಮತ್ತು ವಿಭಾಗೀಯ ಪೀಠ ವರ್ತಕರ ಬೇಡಿಕೆಯನ್ನು ತಿರಸ್ಕರಿಸಿದ್ದವು. 6 ತಿಂಗಳೊಳಗೆ ಸ್ಥಳಾಂತರಗೊಳ್ಳುವುದಾಗಿ ಸುಮಾರು 92 ವರ್ತಕರು ಮುಚ್ಚಳಿಕೆ ನೀಡಿ, ಅರ್ಜಿಯನ್ನು ಹಿಂಪಡೆದಿದ್ದರು.