ಹೊಸಕೋಟೆ: ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿದರಹಳ್ಳಿಯ ಮನೆಯೊಂದರ ಮೇಲೆ ಪೊಲೀಸರು ಶುಕ್ರವಾರ ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 70 ಗೃಹ ಬಳಕೆ ಅಡುಗೆ ಅನಿಲದ ಸಿಲಿಂಡರ್ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮಹಮದ್ ಮುಷ್ತಾಕ್ ಎಂಬಾತನನ್ನು ಬಂಧಿಸಿ ಆಟೊ ಒಂದನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಆರೋಪಿಯು ಕೃಷ್ಣರಾಜಪುರ ಹಾಗೂ ಇತರೆಡೆಯಿಂದ ಗೃಹ ಬಳಕೆ ಸಿಲಿಂಡರ್ಗಳನ್ನು ತಂದು ಅನಿಲವನ್ನು ವಾಣಿಜ್ಯ ಬಳಕೆ ಸಿಲಿಂಡರ್ಗಳಿಗೆ ತುಂಬಿ ಹೆಚ್ಚಿನ ಬೆಲೆಗೆ ಹೋಟೆಲು, ಬೇಕರಿ ಮುಂತಾದೆಡೆ ಮಾರುತ್ತಿದ್ದ ಎನ್ನಲಾಗಿದೆ. ಆವಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ನಡೆಸಿದ್ದಾರೆ.
ಮರದಿಂದ ಬಿದ್ದು ಸಾವು: ಸೊಪ್ಪು ಕೀಳಲು ಮರಕ್ಕೆ ಹತ್ತಿದ್ದ ಶ್ರೀನಿವಾಸ (45) ಎಂಬುವವರು ಆಕಸ್ಮಿಕವಾಗಿ ಜಾರಿ ಬಿದ್ದು ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಗೊರವಿಗೆರೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಅಸ್ವಸ್ಥರಾಗಿ ಬಿದ್ದಿದ್ದ ಅವರನ್ನು ಹೊಸಕೋಟೆ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗಲಿಲ್ಲ.