ಬೆಂಗಳೂರು: ಆದಾಯ ಮೂಲಕ್ಕಿಂತ ಸುಮಾರು 66ಕೋಟಿ ಮೌಲ್ಯದ ಅಕ್ರಮ ಆಸ್ತಿ ಸಂಪಾದನೆ ಆರೋಪ ಎದುರಿಸುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಮಂಗಳವಾರ ಬೆಳಿಗ್ಗೆ ಇಲ್ಲಿನ ಪರಪ್ಪನ ಅಗ್ರಾಹಾರದ ವಿಶೇಷ ನ್ಯಾಯಾಲಯಕ್ಕೆ ಹಾಜರಾದರು.
ಅವರೊಂದಿಗೆ ಜಯಾಲಲಿತಾ ಅವರ ಆಪ್ತ ಸ್ನೇಹಿತೆ ಶಶಿಕಲಾ ನಟರಾಜನ್ ಮತ್ತು ಜಯಾ ಅವರ ಸಾಕು ಮಗ ವಿ. ಸುಧಾಕರನ್ ಅವರು ಆಗಮಿಸಿದ್ದರು.
ಜಯಲಲಿತಾ ಅವರು ಮೂರನೇ ಬಾರಿ ವಿಶೇಷ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದು, ಈ ಹಿಂದೆ ನಡೆದ ವಿಚಾರಣೆ ವೇಳೆಯಲ್ಲಿ ಅವರು 1,339 ಪ್ರಶ್ನೆಗಳಲ್ಲಿ 571 ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಿದ್ದರು.
ಮಂಗಳವಾರ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಬಾಕಿ ಉಳಿದ 768 ಪ್ರಶ್ನೆಗಳ ಬಗ್ಗೆ ವಿಚಾರಣೆ ನಡೆಸಲಿದ್ದಾರೆ. ಈ ಪ್ರಶ್ನೆಗಳಿಗೆ ಜಯಾ ಅವರು ಇಂದು ಉತ್ತರಿಸಬೇಕಿದೆ.
ಜಯಲಲಿತಾ ಅವರು ನ. 8ರಂದು ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಆದರೆ, ಅಂದು ಅವರು ಹಾಜರಾಗಿರಲಿಲ್ಲ. ಅವರ ಪರ ವಕೀಲರು ವಿಚಾರಣೆಗಾಗಿ ಬೇರೊಂದು ದಿನ ನಿಗದಿ ಮಾಡುವಂತೆ ನ್ಯಾಯಾಧೀಶ ಬಿ.ಎಂ. ಮಲ್ಲಿಕಾರ್ಜುನಯ್ಯ ಅವರಲ್ಲಿ ಮನವಿ ಮಾಡಿಕೊಂಡಿದ್ದರು.
ಇದನ್ನು ಮನ್ನಿಸಿದ ನ್ಯಾಯಾಧೀಶರು ನ. 22ಕ್ಕೆ ಜಯಲಲಿತಾ ಅವರು ನ್ಯಾಯಾಲಯಕ್ಕೆ ಹಾಜರಾಗಿ ಬಾಕಿ ಉಳಿದಿರುವ ಪ್ರಶ್ನೆಗಳಿಗೆ ಉತ್ತರಿಸುವಂತೆ ಆದೇಶ ನೀಡಿದ್ದರು.
ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಹೆಚ್ಚುವರಿ ಭದ್ರತೆ ಒದಗಿಸಬೇಕಾದ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯನ್ನು ಕೈಗೊಂಡಿರುವ ನಗರ ಪೊಲೀಸ್ ಅಧಿಕಾರಿಗಳು ನಗರದ ಆಗ್ನೇಯ ವಿಭಾಗದ ಪರಪ್ಪನ ಅಗ್ರಹಾರ, ಎಚ್ಎಸ್ಆರ್ ಲೇಔಟ್, ಎಲೆಕ್ಟ್ರಾನಿಕ್ಸಿಟಿ ಮತ್ತು ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯ ಬಡಾವಣೆಗಳಲ್ಲಿ ಮಂಗಳವಾರ ಬೆಳಿಗ್ಗೆ ಆರು ಗಂಟೆಯಿಂದ ಬುಧವಾರ ಮಧ್ಯರಾತ್ರಿ ಹನ್ನೆರಡು ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಡಿ.ಎಂ.ಕೆ ಪ್ರಧಾನ ಕಾರ್ಯದರ್ಶಿಯ ಮನವಿಯ ಮೇರೆಗೆ, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕಳೆದ ಅಕ್ರಮ ಆಸ್ತಿ ಸಂಪಾದನೆ ಆರೋಪ ಎದುರಿಸುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ವಿಚಾರಣೆ 2003ರಲ್ಲಿ ಚೆನ್ನೈನಿಂದ ಬೆಂಗಳೂರಿಗೆ ಸ್ಥಳಾಂತರಗೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.