ನವದೆಹಲಿ (ಪಿಟಿಐ): ಬಳ್ಳಾರಿ ಸೇರಿದಂತೆ ಕರ್ನಾಟಕದ ಇತರೆ ಅರಣ್ಯ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆ ನಡೆಸಿ ಆರು ವಾರಗಳ ಒಳಗೆ ವರದಿ ಸಲ್ಲಿಸಲು ತಾನೇ ನೇಮಿಸಿರುವ ಕೇಂದ್ರ ಉನ್ನತಾಧಿಕಾರ ಸಮಿತಿಗೆ ಸುಪ್ರೀಂಕೋರ್ಟ್ ಶುಕ್ರವಾರ ಆದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ ನೇತೃತ್ವದ ಪೀಠ ಈ ಆದೇಶ ನೀಡಿದೆ. ಕರ್ನಾಟಕದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿರುವುದರ ಜತೆಗೆ ಅರಣ್ಯ ಭೂಮಿಯಲ್ಲಿಯೂ ಮುಂದುವರಿದಿರುವುದರ ಬಗ್ಗೆ ಆ ರಾಜ್ಯದ ಲೋಕಾಯುಕ್ತ ತಿಳಿಸಿದೆ ಎಂದು ವಕೀಲರಾದ ಪ್ರಶಾಂತ್ ಭೂಷಣ್ ಮೌಖಿಕವಾಗಿ ತಿಳಿಸಿದ ಹಿನ್ನೆಲೆಯಲ್ಲಿ ಕೋರ್ಟ್ ಈ ಆದೇಶ ಹೊರಡಿಸಿದೆ.
ಪ್ರಶಾಂತ್ ಅವರು ಈ ಮೊದಲು ನ್ಯಾಯಮೂರ್ತಿಗಳಾದ ಅಫ್ತಾಬ್ ಆಲಂ ಮತ್ತು ಕೆ.ಎಸ್.ರಾಧಾಕೃಷ್ಣನ್ ಅವರನ್ನೊಳಗೊಂಡ ನ್ಯಾಯಪೀಠದ ಎದುರು ಕರ್ನಾಟಕದಲ್ಲಿ ಯಾವುದೇ ಅಡೆತಡೆ ಇಲ್ಲದೇ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಅವರು ವಿಸ್ತೃತವಾಗಿ ವರದಿ ಸಂಗ್ರಹಿಸಿರುವ ಬಗ್ಗೆ ತಿಳಿಸಿದ್ದರು.
ಬಳ್ಳಾರಿಗೆ ಹೊಂದಿಕೊಂಡಿರುವ ಆಂಧ್ರಪ್ರದೇಶದ ಭಾಗದಲ್ಲಿ ತನಿಖೆ ನಡೆಸುವಂತೆ ಈ ಹಿಂದೆ ಕೋರ್ಟ್ ಸಮಿತಿಗೆ ಸೂಚಿಸಿತ್ತು.