ಬೆಂಗಳೂರು: `ಭದ್ರತಾ ಲೋಪ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವು ಅಕ್ರಮ ಚಟುವಟಿಕೆಗಳ ತಾಣವಾಗುತ್ತಿದೆ' ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಉಚ್ಛಾಧಿಕಾರಿ ಸಮಿತಿಯ ಅಧ್ಯಕ್ಷ ಡಾ.ಸಂತೋಷ್ರಾಯ್ ದೂರಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, `ಕಾರಾಗೃಹದ ಒಳಗೆ ಹಣ, ಮಾದಕ ವಸ್ತು, ಮೊಬೈಲ್ನಂತಹ ವಸ್ತುಗಳು ಅಕ್ರಮವಾಗಿ ರವಾನೆಯಾಗುತ್ತಿವೆ. ಗಂಭೀರ ಆರೋಪದ ಕೈದಿಗಳು ಕಾರಾಗೃಹದಲ್ಲಿ ಇರುವುದರಿಂದ ಈ ರೀತಿಯ ನಿರ್ಲಕ್ಷ ಇನ್ನಷ್ಟು ಅಪಾಯಕ್ಕೆ ಎಡೆಮಾಡಿಕೊಡುತ್ತದೆ. ಜೈಶಂಕರ್ ಕಾರಾಗೃಹದಿಂದ ಪರಾರಿಯಾಗಲು ಸಹ ಭದ್ರತಾ ವ್ಯವಸ್ಥೆಯಲ್ಲಿನ ನಿರ್ಲಕ್ಷ್ಯವೇ ಕಾರಣ. ಕೂಡಲೇ ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದರು.